ರಿಪ್ಪನ್ಪೇಟೆ: ಪ್ರಾಚೀನ ಕಾಲದ ಆರೋಗ್ಯ ರಕ್ಷಣೆಯ ವೈದ್ಯ ಪದ್ಧತಿ ಆಯುರ್ವೇದ, ಕೇವಲ ಚಿಕಿತ್ಸಾ ಪದ್ಧತಿಯಾಗದೆ ಜೀವನ ಪದ್ಧತಿಯಾಗಿದೆ. ಅನಾದಿ ಕಾಲದಿಂದ ಭಾರತೀಯ ಜನಜೀವನದ ಆರೋಗ್ಯ ರಕ್ಷಣೆ, ಮುಂಜಾಗ್ರತೆ ಕುರಿತು ಆಯುರ್ವೇದ ಗ್ರಂಥಗಳಲ್ಲಿ ವಿವರವಾದ ನಿರ್ದೇಶನ, ಚಿಕಿತ್ಸೆ ಉಲ್ಲೇಖಿಸಲಾಗಿದೆ ಎಂದು ಹೊಂಬುಜ ಜೈನಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಹೊಂಬುಜ ಜೈನ ಮಠದಲ್ಲಿ ಆಯೋಜಿಸಿದ್ದ ದೃಢಬಲ ಆಯುರ್ವೇದ ವಸತಿ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಗ್ರಂಥಗಳಲ್ಲಿರುವಂತೆ ಹಿಂದಿನ ಪರೀಕ್ಷೆ ಮತ್ತು ಚಿಕಿತ್ಸೆಯ ಬದಲಾಗಿ ಆಯುರ್ವೇದ ವೈದ್ಯ ಪದ್ಧತಿಗೆ ಹೊಸಸ್ಪರ್ಶ ನೀಡಬೇಕಾಗಿದೆ ಎಂದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿದರು.
ಆಪ್ತಾಸ್ ಆಯುರ್ವೇದ ಸಂಘಟನೆಯ ಡಾ. ಸುಶ್ರುತ ಜೈನ್, ಕೋಣಂದೂರಿನ ಡಾ. ಮುರುಳಿಧರ, ಡಾ. ಅರ್ಹಂತ್, ಡಾ. ಪ್ರತೀಕ್, ಮಠದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ನೇ. ಮಗದುಮ್ಮ, ಗ್ರಾಪಂ ಸದಸ್ಯ ಎಚ್.ಎಸ್.ದೇವೇಂದ್ರ ಇತರರಿದ್ದರು.