ಹೈದರಾಬಾದ್: ಟಾಲಿವುಡ್ ನಲ್ಲಿ ಹೀರೋಗಳಿಗೆ ಸರಿಸಮಾನವಾಗಿ ಸ್ಟಾರ್ ಪಟ್ಟ ಗಳಿಸಿದ ನಾಯಕಿಯರು ಕಡಿಮೆ. ಆದರೆ ಅನುಷ್ಕಾ ಶೆಟ್ಟಿ ಇದಕ್ಕೆ ಅಪವಾದ ಎನ್ನಬಹುದು. ಸೂಪರ್ ಸ್ಟಾರ್ಗಳಂತೆ ಮಿಂಚುತ್ತಿರುವ ಈ ನಟಿ ತನ್ನ ಆಕರ್ಷಕ ಸೌಂದರ್ಯ, ನಟನೆಯಲ್ಲಿ ಮೋಡಿ ಮಾಡಿದವರು. ಈ ಸುಂದರಾಂಗಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸಲು ಗ್ಯಾಪ್ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸ್ವೀಡಿಷ್ ಸಂಸತ್ ಉಡಾಯಿಸಲು ಯೋಜಿಸಿದ್ದ ಐಸಿಸ್ ಉಗ್ರರು ಜರ್ಮನಿಯಲ್ಲಿ ಅರಸ್ಟ್..
ಕಳೆದ ವರ್ಷ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದ ಮೂಲಕ ಯಶಸ್ಸು ಗಳಿಸಿದ್ದ ಅನುಷ್ಕಾ ಈಗ ಮಲಯಾಳಂನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಸದ್ಯ ಕ್ರಿಶ್ ಜಾಗರಲಮುಡಿ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರ ಶುರುವಾಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ನಲ್ಲಿ ‘ವೇದಂ’ ಸಿನಿಮಾ ತೆರೆಕಂಡಿದ್ದು, ಯಶಸ್ವಿಯಾಗಿತ್ತು.
ಹೀಗಾಗಿ ಈ ಚಿತ್ರಕ್ಕೂ ನಿರೀಕ್ಷೆ ಹೆಚ್ಚಿದೆ. ಕ್ರೇಜಿ ಸಬ್ಜೆಕ್ಟ್ನೊಂದಿಗೆ ಹೈದರಾಬಾದ್ನಲ್ಲಿ ವಿಶೇಷ ಸೆಟ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದಾದ ಬಳಿಕ ಒಡಿಶಾಗೆ ತೆರಳಿ ಮಹತ್ವದ ದೃಶ್ಯಗಳ ಚಿತ್ರೀಕರಣ ನಡೆಸಲಿದ್ದಾರೆ ಎನ್ನಲಾಗಿದೆ.
ಹೀಗಿರುವಾಗ ಇತ್ತೀಚೆಗಷ್ಟೇ ಈ ಸಿನಿಮಾದ ಶೀರ್ಷಿಕೆ ಹಾಗೂ ಕಥೆಯ ವಿವರಗಳು ಹೊರಬಿದ್ದಿವೆ. ಆಂಧ್ರ-ಒಡಿಶಾ ಗಡಿ ಪ್ರದೇಶದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಅನುಷ್ಕಾ -ಕ್ರಿಶ್ ಜಗರ್ಲಮುಡಿ ಕಾಂಬಿನೇಷನ್ ನಲ್ಲಿ ಸಿನಿಮಾ ತಯಾರಾಗುತ್ತಿದೆ.
ಅನಿರೀಕ್ಷಿತ ಘಟನೆಯೊಂದರಿಂದ ಗಲಾಟೆಗೆ ಸಿಲುಕಿ ಅನ್ಯಾಯಕ್ಕೊಳಗಾದ ಹುಡುಗಿ ತನ್ನ ಶತ್ರುಗಳನ್ನು ಸದೆಬಡಿಯುವ ಕ್ರಿಮಿನಲ್ ಆಗಿದ್ದು ಹೇಗೆ ಎಂಬ ಕಥಾವಸ್ತುವಿನೊಂದಿಗೆ ಈ ಚಿತ್ರ ತಯಾರಾಗುತ್ತಿದೆ ಎಂದು ವರದಿಯಾಗಿದೆ.
ಇನ್ನು ಈ ಚಿತ್ರಕ್ಕೆ ‘ಘಾಟಿ’ ಎಂಬ ಟೈಟಲ್ ಫಿಕ್ಸ್ ಮಾಡಿರುವುದು ಗೊತ್ತೇ ಇದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.
‘ಘಾಟಿ’ ಎಂದರೆ ಕಣಿವೆ ಎಂದರ್ಥ. ಆ ಹಿನ್ನೆಲೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚುತ್ತಿದೆ.
ಈ ಸಿನಿಮಾದಲ್ಲಿ ವಿಕ್ರಮ್ ಪ್ರಭು ನಾಯಕನಾಗಿ ನಟಿಸುತ್ತಿದ್ದಾರೆ. ಇದನ್ನು ಯುವಿ ಕ್ರಿಯೇಷನ್ಸ್ ಮತ್ತು ಫಸ್ಟ್ ಫ್ರೇಮ್ ಎಂಟರ್ಟೈನ್ಮೆಂಟ್ಸ್ ನಿರ್ಮಿಸಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.