More

    ರೈತ ಗಾರುಡಿಗನಾದ ಕಥೆ; ವಿಧಾ ನಿರ್ದೇಶನದ ಚಿತ್ರದ ಟ್ರೇಲರ್ ರಿಲೀಸ್

    ಬೆಂಗಳೂರು: ಮಹಾಭಾರತದಲ್ಲಿ ಧರ್ಮದ ಪರವಾಗಿ ನಿಂತು, ಪ್ರತ್ಯಕ್ಷವಾಗಿ ಯುದ್ಧ ಮಾಡದೇ ಪರೋಕ್ಷವಾಗಿ ಧರ್ಮವನ್ನು ಗೆಲ್ಲಿಸುವ ಕೃಷ್ಣನಿಗೆ ‘ಗಾರುಡಿಗ’ ಎಂಬ ಹೆಸರಿದೆ. ಈಗ ಅದೇ ಹೆಸರಿನ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

    ವಿಧಾ. ಆರ್ ರಚಿಸಿ, ನಿರ್ದೇಶಿಸಿರುವ ಚಿತ್ರವಿದು. ರೈತನೊಬ್ಬ ಪಟ್ಟಣಕ್ಕೆ ಬಂದಿರುತ್ತಾನೆ. ಅಲ್ಲೊಂದು ಅಪರಾಧವಾಗಿರುತ್ತದೆ. ಶ್ರೀಮಂತ ಹುಡುಗರು ತಾವು ಮಾಡಿದ ಅಪಘಾತವನ್ನು ಮುಚ್ಚಿಡುವ ಪ್ರಯತ್ನದಲ್ಲಿದ್ದಾಗ, ರೈತ ಹೇಗೆ ಆ ಹುಡುಗರೇ ತಪ್ಪು ಒಪ್ಪಿಕೊಳ್ಳುವಂತೆ ಮಾಡುತ್ತಾನೆ ಎನ್ನುವುದರ ಸುತ್ತ ಕಥೆ ಸುತ್ತುತ್ತದೆ. ಚಿತ್ರದಲ್ಲಿ ಮನಸ್ಸಾಕ್ಷಿ ಎಲ್ಲಕ್ಕಿಂತ ಮುಖ್ಯ, ಹಣ ಮುಖ್ಯವಲ್ಲ ಎನ್ನುವ ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದು ಮಾಹಿತಿ ನೀಡುತ್ತದೆ ಚಿತ್ರತಂಡ. ಹಳ್ಳಿ ಹುಡುಗನ ಪಾತ್ರದಲ್ಲಿ ರುದ್ವಿನ್ ಕಾಣಿಸಿಕೊಂಡರೆ, ಅವರಿಗೆ ಮಾನಸ ನಾಯಕಿಯಾಗಿದ್ದಾರೆ. ವಕೀಲರಾಗಿರುವ ಡಾ.ಎಂ.ವೆಂಕಟಸ್ವಾಮಿ ಮುಖ್ಯ ಪೊಲೀಸ್ ಪಾತ್ರ ಮಾಡುವ ಜತೆಗೆ ಚಿತ್ರವನ್ನು ನಿರ್ಮಿಸಿದ್ದಾರೆ.

    ಉಳಿದಂತೆ ಅರ್ಚನಾ, ಸೋನು, ಅರ್ಜುನ್, ಗಿರೀಶ್, ಮೋಹನ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸಂಜೀವ್‌ರಾವ್ ಸಂಗೀತ, ಅನಿರುದ್ದ್-ಭರತ್ ಛಾಯಾಗ್ರಹಣ, ಭಾರ್ಗವ್-ಚೆಲುವಮೂರ್ತಿ ಸಂಕಲನವಿರಲಿದೆ. ಈಗಾಗಲೇ ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಪೇಟೆ ಸೇರಿ ಹಲವೆಡೆ ಚಿತ್ರೀಕರಣ ನಡೆಸಲಾಗಿದ್ದು, ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts