ಬೆಳಗಾವಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿಗಾಗಿ ಕಸ ಸಾಗಿಸುವ 19 ವಾಹನಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಸ್ತಾಂತರಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಥಣಿ ತಾಲೂಕಿನ ಮಂಗಸೂಳಿ, ಕಕಮರಿ, ನಂದಗಾಂವ, ಸಂಕೋನಟ್ಟಿ, ಬೈಲಹೊಂಗಲ ತಾಲೂಕಿನ ದೇಶನೂರು, ಚಿಕ್ಕೋಡಿ ತಾಲೂಕಿನ ಶಿರಗಾಂವ, ಜತ್ರಾಟ, ಜೈನಾಪುರ, ಅಂಕಾಳೆ, ಹುಕ್ಕೇರಿ ತಾಲೂಕಿನ ದಡ್ಡಿ, ಸಲಂವಾಡಿ, ಯಮಕನಮರಡಿ, ನಿಡಸೋಸಿ, ರಾಯಬಾಗ ತಾಲೂಕಿನ ಕಪ್ಪಲಗುದ್ದಿ, ರಾಯಬಾಗ ಗ್ರಾಮೀಣ, ಹಂದಿಗುಂದ, ಪರಮಾನಂದವಾಡಿ, ಸವದತ್ತಿ ತಾಲೂಕಿನ ಇನಾಮಹೊಂಗಲ, ಯಕ್ಕುಂಡಿ ಗ್ರಾಮ ಪಂಚಾಯಿತಿಗಗಳಿಗೆ ಕಸ ಸಾಗಿಸುವ ವಾಹನಗಳ ಕೀಯನ್ನು ಅಧಿಕಾರಿಗಳಿಗೆ ಸಚಿವ ಸುರೇಶ ಅಂಗಡಿ ಹಸ್ತಾಂತರಿಸಿದರು.
ಸುರೇಶ ಅಂಗಡಿ ಮಾತನಾಡಿ, ಮನೆ ಬಾಗಿಲಿಗೇ ಬರುವ ಕಸದ ವಾಹನಗಳಿಗೆ ಹಸಿ ಹಾಗೂ ಒಣ ಕಸವನ್ನು ಸಾರ್ವಜನಿಕರು ಪ್ರತ್ಯೇಕಿಸಿ ನೀಡಬೇಕು. ಮನೆ ಹಾಗೂ ಪರಿಸರದ ಸ್ವಚ್ಛತೆ ಕಾಪಾಡುವ ಮೂಲಕ ಸುಂದರ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ, ತಾಪಂ, ಗ್ರಾಪಂ ಸದಸ್ಯರು ಇದ್ದರು.