ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ತಾಲೂಕಿನ ಆನೆಗೊಂದಿ, ಸಣಾಪುರ ಭಾಗದ ಕೆಲ ಸ್ಮಾರಕಗಳು ಭಾನುವಾರ ಜಲಾವೃತವಾಗಿದ್ದು, ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ.
ಆನೆಗೊಂದಿ ಬಳಿ 64 ಕಂಬಗಳ ಶಿಲಾಮಂಟಪ, ಚಿಂತಾಮಣಿ ಖೂಳಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ವಿರುಪಾಪುರ ಗಡ್ಡಿ, ಋಷ್ಯಮುಖ ಪರ್ವತ, ನವವೃಂದಾವನ ಗಡ್ಡಿ ಸಂಪರ್ಕ ಕಡಿತಗೊಂಡಿದೆ. ಐತಿಹಾಸಿಕ ಪ್ರಸಿದ್ಧ ವಿರುಪಾಪುರ ಗಡ್ಡಿ ಅಕ್ವಡೆಕ್ಟ್ ಭಾಗಶಃ ಮುಳುಗಿದೆ. ಹನುಮನಹಳ್ಳಿ, ಸಣಾಪುರ, ಆನೆಗೊಂದಿ, ಚಿಕ್ಕಜಂತಕಲ್, ವಿನೋಬಾನಗರ, ಹಳೇ ಅಯೋಧ್ಯೆ ತೀರದ ಭತ್ತ ಮತ್ತು ಬಾಳೆ ಗದ್ದೆಗಳಿಗೆ ನೀರು ನುಗ್ಗಿದೆ. ಮೀನುಗಾರಿಕೆ ನಿಷೇಧಿಸಿದ್ದು, ಯಾಂತ್ರಿಕ ದೋಣಿಗಳು ದಡ ಸೇರಿವೆ. ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುವ ಸಂಭವವಿದ್ದು, ನದಿ ತೀರದ 8 ಗ್ರಾಮಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಕೃಷಿ ಚಟುವಟಿಕೆಗೆ ತೆರಳದಂತೆ ಗ್ರಾಪಂಗಳಿಂದ ಡಂಗುರ ಸಾರಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ತುಂಗಭದ್ರಾ ನದಿ ತೀರದಲ್ಲಿ ಕೃಷಿಕರು, ಮೀನುಗಾರರು ಮತ್ತು ಸಾರ್ವಜನಿಕರು ಹೋಗದಂತೆ ಈಗಾಗಲೇ ಎಚ್ಚರಿಕೆ ನೀಡುವುದರ ಜತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಸಿಬ್ಬಂದಿ ಗ್ರಾಮದಲ್ಲೇ ಇರುವಂತೆ ಸೂಚಿಸಲಾಗಿದೆ.
| ಯು.ನಾಗರಾಜ್ ತಹಸೀಲ್ದಾರ್, ಗಂಗಾವತಿ