ಗಂಗಾವತಿ: ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಅಧಿಕಾರಿಗಳ ತಂಡ ಅಲರ್ಟ್ ಆಗಿದ್ದು, ತುರ್ತು ಸಭೆ ಆಯೋಜಿಸುವ ಮೂಲಕ ನೀತಿ ಸಂಹಿತೆ ಜಾರಿಗೆ ಬುಧವಾರ ಮುಂದಾದರು.
ತಹಸೀಲ್ದಾರ್ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ಕ್ಷಿಪ್ರ ಕಾರ್ಯಚರಣೆ ನಡೆಸಿ, ಸರ್ಕಾರದ ಸಾಧನೆಯ ಮಾಹಿತಿ ಮತ್ತು ರಾಜಕೀಯ ಪಕ್ಷಗಳ ಪ್ರಚಾರದ ್ಲೆಕ್ಸ್ ಮತ್ತು ಭಿತ್ತಿ ಪತ್ರಗಳನ್ನು ತೆರವುಗೊಳಿಸಿದರು.
ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ ತಂಡ ವಿದ್ಯುತ್ ಕಂಪ, ರಸ್ತೆ ಡಿವೈಡರ್, ಕಟ್ಟಡ ಮತ್ತು ಆಟೋ ಸೇರಿ ಇತರ ವಾಹನಗಳಿಗೆ ಅಂಟಿಸಿದ್ದ ಭಿತ್ತಿ ಪತ್ರಗಳನ್ನು ತೆರವುಗೊಳಿಸಿದರು. ಕೆಲವುಗಳಿಗೆ ಪೇಪರ್ ಅಂಟಿಸುವ ಮೂಲಕ ಮರೆಮಾಚಿದರು. ಇಲಾಖೆಯಿಂದ ಪರವಾನಗಿ ಪಡೆಯದೇ ಹಾಕಿದ್ದ ಖಾಸಗಿ ಸಂಸ್ಥೆಗಳ ್ಲೆಕ್ಸ್ಗಳನ್ನು ತೆರವುಗೊಳಿಸಿದರು. ಕೆಲವೆಡೆ ನಿಗದಿಯಾಗಿದ್ದ ಶಾಸಕ ಮತ್ತು ಜನಪ್ರತಿನಿಧಿಗಳ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಯಿತು.
ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ವಾರದಿಂದಲೇ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ತತ್ಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿದ್ದು, ಕಾನೂನು ಬಾಹೀರ ಚಟುವಟಿಕೆಗಳ ಮೇಲೆ ನಿಗಾವಹಿಸಲಿದ್ದಾರೆ. ಕ್ಷೇತ್ರದ ಗಡಿಭಾಗದಲ್ಲಿ ಚೆಕ್ಪೋಸ್ಟ್ಗಳನ್ನು ಬಲಪಡಿಸಲಾಗುವುದು. ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದರು. ಪರಿಸರ ಇಂಜಿನಿಯರ್ ಹೇಮಂತ ನಾಯ್ಕ, ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಇತರರಿದ್ದರು.