ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಕಾಯ್ದೆ ವಿರೋಧಿಸಿ ಸಿಪಿಐ(ಎಂಎಲ್) ಲಿಬರೇಷನ್ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಸಮಿತಿ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೈರಾಜು ಮಾತನಾಡಿ, ಕೇಂದ್ರ ಸರ್ಕಾರದ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಕಾಯ್ದೆಗಳು ಅಸಂವಿಧಾನಿಕವಾಗಿವೆ. ಅವುಗಳು ತಾರತಮ್ಯದಿಂದ ಕೂಡಿವೆ. ಪೌರತ್ವಕ್ಕೆ ಮಾನದಂಡ ಅವೈಜ್ಞಾನಿಕ ರೀತಿಯಲ್ಲಿ ರೂಪಿಸಲಾಗಿದ್ದು, ಹಿಂದು ರಾಷ್ಟ್ರದೆಡೆ ಕ್ರೊಡೀಕರಿಸುವ ಹುನ್ನಾರ ನಡೆದಿದೆ.
ಜನವಿರೋಧಿ ಕಾನೂನು ಹಿಂಪಡೆಯಲು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕಿದೆ. ದೆಹಲಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಸಮುದಾಯದವರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಿರಸ್ತೇದಾರ್ ಅನಂತ ಜೋಶಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಜೆ.ಭಾರದ್ವಾಜ್, ಪರಶುರಾಮ್, ಬಾಬರ್, ಅಬ್ದುಲ್, ಚಾಂದ್ಪಾಷಾ ಇತರರಿದ್ದರು.