ಗಂಗಾವತಿ: ತಾಲೂಕಿನ ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ನಿಷೇಧಿತ ಪ್ರದೇಶದಿಂದ ಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಾಲೂಕಾಡಳಿತ ಮಂಗಳವಾರ ವಶಪಡಿಸಿಕೊಂಡಿದ್ದು, ಚಾಲಕರು ಪರಾರಿಯಾಗಿದ್ದಾರೆ.
ತಾಲೂಕಿನ ಮಲ್ಲಾಪುರ, ಬಸವನದುರ್ಗಾ, ರಾಂಪುರ ವ್ಯಾಪ್ತಿಯಲ್ಲಿ ಕಲ್ಲು ಅಕ್ರಮ ಗಣಿಗಾರಿಕೆ ಹೆಚ್ಚುತ್ತಿದ್ದು, ಹಂಪಿ ಪ್ರಾಧಿಕಾರ ವ್ಯಾಪಿಗೆ ಒಳಪಟ್ಟಿದ್ದರಿಂದ ನಿಷೇಧಿತ ಪ್ರದೇಶ ೋಷಿಸಲಾಗಿದೆ. ಉದ್ದೇಶಿತ ಪ್ರದೇಶದಲ್ಲಿ ಕಲ್ಲುಗಳನ್ನು ಒಡೆದು ಲಾರಿಗಳ ಮೂಲಕ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರ್ ಎಂ.ರೇಣುಕಾ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಎರಡು ಲಾರಿಗಳಲ್ಲಿನ ತುಂಬಿದ್ದ ದ್ರಾಕ್ಷಿ ತೋಟದ 18 ಟನ್ ನಷ್ಟು ಕಲ್ಲುಕಂಬಗಳನ್ನು ಲಾರಿ ಸಮೇತ ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಭಾಗದ ಕಲ್ಲುಗಳಿಗೆ ತೆಲಂಗಾಣ, ಮಹಾರಾಷ್ಟ್ರದಲ್ಲಿ ಬೇಡಿಕೆಯಿದ್ದು, ಪರವಾನಗಿ ಇಲ್ಲದೇ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಗಣಿ ಮತ್ತು ವಿಜ್ಞಾನಿ ಇಲಾಖೆ ತಜ್ಞೆ ಸಿ.ಎಚ್.ರೂಪಾ ಮಾತನಾಡಿ, ನಿಷೇಧಿತ ಪ್ರದೇಶದಲ್ಲಿ ಕಲ್ಲು ಅಕ್ರಮ ಗಣಿಗಾರಿಕೆ ನಿಷೇಧವಿದ್ದು, ಹಲವು ಬಾರಿ ತಿಳಿಹೇಳಲಾಗಿದೆ. ನಿರ್ಲಕ್ಷಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು. ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಮಹಾಲಕ್ಷ್ಮಿ, ಗ್ರಾಮೀಣ ಪಿಎಸೈ ಜೆ.ದೊಡ್ಡಪ್ಪ ಇತರರಿದ್ದರು.