ಗಂಗಾವತಿ: ನಗರದ ರಾಯಚೂರು ರಸ್ತೆ ನಮ್ಮ ಗ್ರೋಮೊರ್ ಕೇಂದ್ರದಲ್ಲಿ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ವಿದೇಶದ ರಸಗೊಬ್ಬರವನ್ನು ಕೃಷಿ ಇಲಾಖೆ ಜಾರಿದಳದ ಅಧಿಕಾರಿಗಳ ತಂಡ ಗುರುವಾರ ವಶಪಡಿಸಿಕೊಂಡಿದೆ.
ಗೋದಾಮಿನಲ್ಲಿದ್ದ ಯುಕೆ ದೇಶದ್ದು ಎನ್ನಲಾದ ಪಾಲಿಹಾಲೈಟ್ ಹೆಸರಿನ 70,500 ರೂ. ಮೌಲ್ಯದ 50 ಕೆಜಿ ತೂಕದ 47 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಸುಳಿವಿನ ಮೇರೆಗೆ ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ಹಾಗೂ ರಸಗೊಬ್ಬರ ಪರಿವೀಕ್ಷಕ ನಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದಾಗ ಅನುಮತಿ ಪಡೆಯದೆ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಿಂಗಪ್ಪ ಮಾತನಾಡಿ, ಯಾವುದೇ ರಸಗೊಬ್ಬರ ಮಾರಾಟ ಮಾಡಬೇಕಾದರೆ ಇಲಾಖೆಯಿಂದ ಪರವಾನಗಿ ಪಡೆಯಬೇಕು. ವಿದೇಶ ಮೂಲದ ಲಘು ಪೋಷಕಾಂಶವುಳ್ಳ ರಸಗೊಬ್ಬರವನ್ನು ಇಲಾಖೆಯಿಂದ ಅನುಮತಿ ಪಡೆಯದೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಗೊಬ್ಬರದ ಚೀಲಗಳನ್ನು ಜಪ್ತಿ ಮಾಡಿ, ಗುಣ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದರು. ಕೃಷಿ ಅಧಿಕಾರಿಗಳಾದ ಪ್ರಕಾಶ, ಲಕ್ಷ್ಮೀ ಇತರರಿದ್ದರು.