ಮುಂಬೈ: ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಅವರು ತಮ್ಮ ಕ್ಷೇತ್ರದ ಜನರಿಗೆ ಮಾಡಿದ ಕೆಲಸಗಳು ಅಂತಿಮವಾಗಿ ಮುಖ್ಯವಾಗುತ್ತವೆ ಮತ್ತು ಅವರಿಗೆ ಗೌರವವನ್ನು ತರುತ್ತವೆ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಸಂಸತ್ ಸದಸ್ಯರಿಗೆ ಸುದ್ದಿಸಂಸ್ಥೆಯೊಂದು ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಅವಕಾಶವಾದಿ ರಾಜಕಾರಣಿಗಳು ಆಡಳಿತ ಪಕ್ಷದೊಂದಿಗೆ ಸಂಬಂಧ ಉಳಿಸಿಕೊಳ್ಳಲು ಬಯಸುತ್ತಿರುವುದು ಸರಿಯಲ್ಲ. ಇಂತಹ “ಸಿದ್ಧಾಂತದಲ್ಲಿನ ಅವನತಿ” ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
“ತಮ್ಮ ಸಿದ್ಧಾಂತದ ಆಧಾರದ ಮೇಲೆ ದೃಢವಾಗಿ ನಿಲ್ಲುವ ಜನರಿದ್ದಾರೆ ಆದರೆ ಅಂತಹ ಜನರ ಸಂಖ್ಯೆ ಕ್ಷೀಣಿಸುತ್ತಿದೆ. ಮತ್ತು ಸಿದ್ಧಾಂತದಲ್ಲಿ ಅವನತಿಯಾಗುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ” ಎಂದು ಅವರು ಹೇಳಿದರು.
ಯಾವುದೇ ಪಕ್ಷದ ಸರ್ಕಾರವೇ ಇರಲಿ, ಒಳ್ಳೆಯ ಕೆಲಸ ಮಾಡುವವರಿಗೆ ಗೌರವ ಸಿಗುವುದಿಲ್ಲ. ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆಯಾಗುವುದಿಲ್ಲ ಎಂದು ನಾನು ಯಾವಾಗಲೂ ತಮಾಷೆಯಾಗಿ ಹೇಳುತ್ತೇನೆ ಎಂದು ಗಡ್ಕರಿ ಹೇಳಿದರು.
ಅವಕಾಶವಾದಿಗಳಲ್ಲಿ “ಬಲಪಂಥೀಯ, ಎಡಪಂಥೀಯ ಎಂಬ ಭೇದವಿಲ್ಲ. ಎಲ್ಲರೂ ಆಡಳಿತ ಪಕ್ಷದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತಾರೆ” ಎಂದು ಅವರು ಸೇರಿಸಿದರು.
ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ತಾಯಿ ಸ್ಥಾನದಲ್ಲಿದೆ ಎಂದು ಗಡ್ಕರಿ ಹೇಳಿದರು.
ಪ್ರಚಾರ ಮತ್ತು ಜನಪ್ರಿಯತೆ ಅಗತ್ಯ ಆದರೆ ಅವರು ಸಂಸತ್ತಿನಲ್ಲಿ ಏನು ಮಾತನಾಡುತ್ತಾರೆ ಎನ್ನುವುದಕ್ಕಿಂತ ಆಯಾ ಕ್ಷೇತ್ರದ ಜನರಿಗಾಗಿ ಹೇಗೆ ಕೆಲಸ ಮಾಡುತ್ತಾರೆ ಎಂಬುದು ಮುಖ್ಯ ಎಂದರು.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ವಾಕ್ಚಾತುರ್ಯವನ್ನು ಶ್ಲಾಘಿಸಿದ ಗಡ್ಕರಿ ಅವರು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಡವಳಿಕೆ, ಸರಳತೆ ಮತ್ತು ವ್ಯಕ್ತಿತ್ವದಿಂದ ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ನಾನು ತುಂಬಾ ಪ್ರಭಾವಿತನಾದ ವ್ಯಕ್ತಿ ಜಾರ್ಜ್ ಫರ್ನಾಂಡಿಸ್ ಎಂದು ಅವರು ಹೇಳಿದರು.