ಗದಗ: ಗದಗ ಜಿಲ್ಲೆಯಲ್ಲೂ ಒಳ ಮೀಸಲಾತಿ ಕಿಚ್ಚು ಆರಂಭವಾಗಿದ್ದು ಹಳ್ಳಿ ಹಳ್ಳಿಗೂ ವ್ಯಾಪ್ತಿಸುತ್ತಿದೆ.
ಒಳ ಮೀಸಲಾತಿಯನ್ನು ವಿರೋಧಿಸಿ ಬೆಳಧಡಿ ಗ್ರಾಮದಲ್ಲಿ ಲಂಬಾಣಿ ಸಮುದಾಯ ರೊಚ್ಚಿಗೆದ್ದಿದ್ದು ಗದಗ ತಾಲೂಕಿ ಬೆಳಧಡಿ ತಾಂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಚುನಾವಣೆ ಬಹಿಷ್ಕಾರಕ್ಕೆ ಬೆಳಧಡಿ ತಾಂಡಾ ನಿವಾಸಿಗಳು ನಿರ್ಧಾರ ಮಾಡಿದ್ದು ಜನರು ಬೆಳಧಡಿ ಗ್ರಾಮದಲ್ಲಿ ಬೀದಿಗಿಳಿದು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳ ಮೀಸಲಾತಿ ವಿಚಾರದಲ್ಲಿ ತಾಂಡಾ ನಿವಾಸಿಗಳು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.
ತಾಂಡಾ ನಿವಾಸಿಗಳು ಬೆಳಧಡಿ ತಾಂಡಾದಲ್ಲಿ ರಾತ್ರೋರಾತ್ರಿ ಬಿಜೆಪಿ, ಜಿಡಿಎಸ್ ಹಾಗೂ ಕಾಂಗ್ರೆಸ್ ಧ್ವಜ, ಬ್ಯಾನರ್ ತೆಗೆದು ಹಾಕಿದ್ದಾರೆ. ಸರ್ಕಾರ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್, ಜೆಡಿಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಹಾಗೂ ಬಂಜಾರ ಅಭಿವೃದ್ಧಿ ನಿಮಗಮದ ಅಧ್ಯಕ್ಷ ಪಿ ರಾಜು ವಿರುದ್ಧವೂ ಧಿಕ್ಕಾರ ಹಾಕಲಾಗಿದೆ.
ಚುನಾವಣಾ ಪ್ರಚಾರಕ್ಕೆ ತಾಂಡಾಗಳಿಗೆ ಯಾರು ಬರುವಂತಿಲ್ಲಾ, ಬಂದರೆ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಎಚ್ಚರಿಕೆ ಕೂಡ ಜನರು ನೀಡಿದ್ದಾರೆ.