ಸಿಂಧನೂರು: ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರಿಗೆ ಅನುಕೂಲ ಕಲ್ಪಿಸಲು ಸ್ಥಳೀಯ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ನಿಂದ ಬುಧವಾರ ಜೈಹಿಂದ್ ಉಚಿತ ಆಹಾರ ಕೇಂದ್ರವನ್ನು ಉದ್ಘಾಟಿಸಲಾಯಿತು.
ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ನಾಗರಾಜ ಕಾಟ್ವಾ ಮಾತನಾಡಿ, ಸರ್ಕಾರಿ ಆಸ್ಪತ್ರೆಯಾಗಲಿ, ಸಂಸ್ಥೆಗಳಾಗಲಿ ಬೆಳೆಸಲು ಉಳಿಸಲು ಎಲ್ಲರ ಸಹಾಯ, ಸಹಕಾರ ಅಗತ್ಯವಾಗಿದೆ.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟದ ವ್ಯವಸ್ಥೆ ಇದ್ದು, ರೋಗಿಗಳ ಸಂಬಂಧಿಕರಿಗೆ ಊಟದ ವ್ಯವಸ್ಥೆ ಇದ್ದಿಲ್ಲ. ಈ ನಿಟ್ಟಿನಲ್ಲಿ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ನ ಯುವಕರು ಯೋಚನೆ ಮಾಡಿದ್ದು, ಸಮಯೋಚಿತವಾಗಿದೆ. ಉಚಿತ ಆಹಾರ ವಿತರಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಇದನ್ನೂ ಓದಿ: ಮತದಾನ ಮಾಡಿದವರಿಗೆ ಉಚಿತ ಆಹಾರ; ಚುನಾವಣಾ ಆಯೋಗದಿಂದ ಖಡಕ್ ಸೂಚನೆ
ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಮಹ್ಮದ್ ಹುಸೇನ್ಸಾಬ್ ಮಾತನಾಡಿ, ಸಮಾಜದಲ್ಲಿ ಬಡತನದಲ್ಲಿರುವ ನಮ್ಮ ಜವಾಬ್ದಾರಿಯನ್ನು ಎಚ್ಚರಿಸುತ್ತದೆ. ಪ್ರವಾದಿಯವರ ಆಶಯದಂತೆ ನಿರ್ಗತಿಕರಿಗೆ, ಬಡವರಿಗೆ ಊಟ ನೀಡುವ ಕಾರ್ಯ ಸಾರ್ಥಕತೆಯತ್ತ ಕೊಂಡೊಯ್ಯುತ್ತದೆ ಎಂದರು. ಮೌಲಾನಾ ತಾಜುದ್ದೀನ್ ಆಹಾರ ಕೇಂದ್ರವನ್ನು ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಪಂಪಯ್ಯ ಸ್ವಾಮಿ ಸಾಲಿಮಠ ಹಾಗೂ ಸಮುದಾಯದ ಎಸ್.ದೇವೇಂದ್ರಗೌಡ ಮಾತನಾಡಿದರು.
ಯುನಾನಿ ವೈದ್ಯ ಅಮ್ಜದ್ ಷರೀಫ್, ಮುಖಂಡರಾದ ಶೇಖ್ಸಾಬ್ ಮುಳ್ಳೂರು ಸಾಹುಕಾರ, ಸಿರಾಜ್ಪಾಷಾ, ನಬೀಸಾಬ್ ಬಾಗಲಕೋಟೆ, ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಜಿಲ್ಲಾಧ್ಯಕ್ಷ ಮಹ್ಮದ್ಅಲಿ ಮುರ್ತುಜಾ, ಅಧ್ಯಕ್ಷ ಡಾ.ವಸೀಮ್, ಕಾರ್ಯದರ್ಶಿ ನಯೀಮ್ ಇರ್ಫಾನ್, ಸೈಯದ್ ತನ್ವೀರ್, ಸೋಹೇಬ್, ಉಮರ್, ಸನಾವುಲ್ಲಾಖಾನ್, ನಿಸಾರ್, ಖಾಜಾ, ಸೈಯದ್ ಹಜರ್ ಇದ್ದರು.