ಇಸ್ಲಾಮಾಬಾದ್: ಪಾಕಿಸ್ತಾನದ ರಾಜಕೀಯದ ಮೇಲೆ ಸೇನಾ ಹಿಡಿತವಿದೆ ಎಂಬುದು ಬಹಿರಂಗ ಸತ್ಯ. ಇತ್ತೀಚೆಗೆ ಇದು ಮತ್ತೊಮ್ಮೆ ಸಾಬೀತಾಗಿದೆ. ನಾಲ್ಕನೇ ಬಾರಿಗೆ ಪ್ರಧಾನಿಯಾಗುವ ಕನಸು ಕಂಡಿದ್ದ ನವಾಜ್ ಷರೀಫ್ (74) ಅವರಿಗೆ ಕೊನೆಯ ಕ್ಷಣದಲ್ಲಿ ಸೇನೆ ಕೈಕೊಟ್ಟಿತು. ಹೀಗಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿದರು. ಆದರೆ ಪುತ್ರಿ ಮರ್ಯಮ್ (50) ರಾಜಕೀಯ ಭವಿಷ್ಯಕ್ಕಾಗಿ ನವಾಜ್ ಷರೀಫ್ ಸೇನೆಯ ಮಾತಿಗೆ ಕಿವಿಗೊಟ್ಟು ಪ್ರಧಾನಿ ಹುದ್ದೆಗೆ ತನ್ನ ಸಹೋದರ ಶೆಹಬಾಜ್ ಷರೀಫ್ ಹೆಸರನ್ನು ಪ್ರಸ್ತಾಪಿಸಿದರು ಎಂಬುದು ಈಗ ಪಾಕ್ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇದರ ವಿವರ ಇಲ್ಲಿದೆ..
ಇದನ್ನೂ ಓದಿ: ಹಸು ಮಾಂಸದಿಂದ ತಯಾರಾಯ್ತು ‘ಅಕ್ಕಿ’! ದಕ್ಷಿಣ ಕೊರಿಯಾ ವಿಜ್ಞಾನಿಗಳಿಂದ ಹೊಸ ಅಕ್ಕಿ ಅಭಿವೃದ್ಧಿ..
ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದಿಂದಾಗಿ ಸೇನೆ ನವಾಜ್ಗೆ ಷರತ್ತುಗಳನ್ನು ವಿಧಿಸಿತ್ತು. ಪ್ರಧಾನಿ ಹುದ್ದೆ ಬೇಕೆ? ಅಥವಾ ಪುತ್ರಿ ಪಂಜಾಬ್ ಮುಖ್ಯಮಂತ್ರಿ ಗಾದಿಗೆ ಏರಬೇಕೇ? ಯಾವುದಾದರೂ ಒಂದನ್ನು ಆರಿಸಿಕೊಳ್ಳಿ ಎಂದು ಸೇನೆ ಕಟ್ಟಪ್ಪಣೆ ಮಾಡಿತ್ತು. ಆಗ ಯೋಚಿಸಿದ ನವಾಜ್ ಷರೀಫ್, ದಿವಾಳಿಯಾಗಿರುವ ದೇಶಕ್ಕೆ ಸೇನೆ ಕಪಿಮುಷ್ಠಿಯಲ್ಲಿ ಪ್ರಧಾನಿಯಾಗುವುದಕ್ಕಿಂತ 12 ಕೋಟಿ ಜನಸಂಖ್ಯೆ ಹೊಂದಿರುವ ಪಂಜಾಬ್ ಪ್ರಾಂತ್ಯದ ಆಡಳಿತವನ್ನು ತಮ್ಮ ಉತ್ತರಾಧಿಕಾರಿಯಾದ ಮರ್ಯಮ್ ಗೆ ನೀಡಿದರೆ ಸಾಕೆಂದು ಒಪ್ಪಿಕೊಂಡರಂತೆ. ಇದರ ಹಿಂದೆ ಪುತ್ರಿ ಮರ್ಯಾಮ್ ಭವಿಷ್ಯವೂ ಇದೆ ಎಂಬುದು ಬೇರೆ ಮಾತು. ಇದನ್ನೆಲ್ಲ ಅರಿತೇ ಪ್ರಧಾನಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್ -ಎನ್) ಪಕ್ಷದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಇಮ್ರಾನ್ ಬೆಂಬಲಿಗರು ಕರಾಚಿಯಲ್ಲಿ ಪ್ರತಿಭಟನೆ: ಚುನಾವಣಾ ಫಲಿತಾಂಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇದರ ಅಂಗವಾಗಿ ಶನಿವಾರ ಇಸ್ಲಾಮಾಬಾದ್ನಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ವಿಧಿಸಿದ್ದರೂ ಜೈಲಿನಲ್ಲಿರುವ ಇಮ್ರಾನ್ ಖಾನ್ ಕರೆ ಮೇರೆಗೆ ಪ್ರತಿಭಟನೆ ನಡೆಸಿದರು. ಕರಾಚಿಯಲ್ಲಿ ಪ್ರತಿಭಟನೆಗೆ ಮುಂದಾದ ಇಮ್ರಾನ್ ಅನುಯಾಯಿಗಳು ಮತ್ತು ವಕೀಲ ಸಲ್ಮಾನ್ ಅಕ್ರಮ್ ರಜಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘ಅದಕ್ಕಾಗಿಯೇ ನಾವು ಹಮಾಸ್ ಜೊತೆ ಶಾಂತಿ ಮಾತುಕತೆ ನಿಲ್ಲಿಸಿದ್ದೇವೆ’: ನೆತನ್ಯಾಹು