ನವದೆಹಲಿ: ಏನಾದರೂ ಅನ್ಯಾಯವಾದಾಗ ಕೆಲವರು ತಮ್ಮ ವ್ಯಾಪ್ತಿಯ ಶಾಸಕ-ಸಚಿವ ಅಥವಾ ಮಾಜಿ ಜನಪ್ರತಿನಿಧಿಗಳ ಮನೆಗೆ ಹೋಗಿ ನೆರವು ಕೇಳುತ್ತಾರೆ. ಎಷ್ಟೋ ಸಲ ಅವರು ಸಹಾಯವನ್ನೂ ಮಾಡುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ನನ್ನನ್ನು ರಕ್ಷಿಸಿ ಎಂದು ಮಾಜಿ ಸಚಿವರಾಗಿರುವ ತನ್ನ ತಂದೆಯ ವಿರುದ್ಧವೇ ದೂರು ನೀಡಿದ್ದಾಳೆ.
ಯುವತಿಯೊಬ್ಬಳು ಹೀಗೆ ದೂರು ನೀಡಿದ್ದರಿಂದ ಸೋಮವಾರ ರಾತ್ರಿ ಮಾಜಿ ಸಚಿವರೊಬ್ಬರ ಮನೆಗೆ ಧಾವಿಸಿದ್ದ ಮಹಿಳಾ ಆಯೋಗದವರು, ತಂದೆಯ ಮನೆಯಿಂದಲೇ ಪುತ್ರಿಯನ್ನು ರಕ್ಷಿಸಿ ಆಶ್ರಯ ಒದಗಿಸಿದ್ದಾರೆ. ಮನೆಯಲ್ಲಿ ನನ್ನನ್ನು ಕೂಡಿ ಹಾಕಿ ತಂದೆ ಹಾಗೂ ಸಹೋದರ ನನ್ನನ್ನು ಒಂಚೂರೂ ಕರುಣೆ ತೋರದೆ ದಿನಾ ಹೊಡೆಯುತ್ತಿದ್ದಾರೆ. ನನ್ನನ್ನು ದಯವಿಟ್ಟು ರಕ್ಷಿಸಿ ಎಂದು ಈ ಯುವತಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ಯುವತಿಯ ದೂರಿನ ಮೇರೆಗೆ ದೆಹಲಿಯ ಮಹಿಳಾ ಆಯೋಗದವರು ಸೋಮವಾರ ರಾತ್ರಿ ದೆಹಲಿಯ ಪಶ್ಚಿಮ್ ವಿಹಾರ್ನಲ್ಲಿರುವ ಕಾಂಗ್ರೆಸ್ನ ಮಾಜಿ ಸಚಿವ ರಾಜ್ಕುಮಾರ್ ಚೌಹಾಣ್ ಮನೆಯಿಂದ ಚೌಹಾಣ್ ಪುತ್ರಿಯನ್ನು ರಕ್ಷಿಸಿದ್ದಾರೆ. ಚೌಹಾಣ್ ಮಾಜಿ ಸಚಿವರಷ್ಟೇ ಅಲ್ಲದೆ ನಾಲ್ಕು ಸಲ ಶಾಸಕರಾಗಿಯೂ ಆಯ್ಕೆ ಆಗಿದ್ದರು.
ಇದನ್ನೂ ಓದಿ: ಮೋದಿ ಉದ್ಘಾಟಿಸಿದ ಈ ಸುರಂಗ ಮಾರ್ಗದಲ್ಲಿ ಭಾನುವಾರ ಏನಾಯ್ತು ಗೊತ್ತಾ?!
ಯುವತಿಗೆ 1999ರಲ್ಲೇ ಮದುವೆಯಾಗಿತ್ತು. ಆದರೆ ಪತಿಯೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಆಕೆ ತನ್ನ ತಂದೆಯ ಮನೆಯಲ್ಲೇ ನೆಲೆಸಿದ್ದಳು. ದುರಂತವೆಂದರೆ ಆಕೆಯ ಪತಿ ಬೇರೊಬ್ಬಳೊಂದಿಗೆ ಎರಡನೇ ವಿವಾಹವಾಗಿದ್ದಾನೆ. ಆದರೆ ಇತ್ತ ತಂದೆ ವಿಚ್ಛೇದನಕ್ಕೂ ಅವಕಾಶ ಕೊಡುತ್ತಿಲ್ಲ. ಅಲ್ಲದೆ ಪ್ರತಿಷ್ಠೆಯ ಕಾರಣಕ್ಕೆ ಹೊಸ ಜೀವನವನ್ನು ನಡೆಸಲೂ ಬಿಡುತ್ತಿಲ್ಲ. ಮನೆಯಲ್ಲೇ ಕೂಡಿ ಹಾಕಿದ್ದಲ್ಲದೆ ಹೊರಗೆ ಹೋಗಲೂ ಬಿಡದೆ ಬಡಿಯುತ್ತಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಗಿ ಆಯೋಗದವರು ಮಾಹಿತಿ ನೀಡಿದ್ದಾರೆ.
ಯುವತಿಗೆ ಇಬ್ಬರು ಪುತ್ರಿಯರಿದ್ದು ಚಂಡೀಗಢದ ನ್ಯಾಯಾಲಯದಲ್ಲಿ ವಿಚ್ಛೇದನದ ಪ್ರಕರಣ ಬಾಕಿ ಇದೆ. ಈಕೆಯ ಕಿರಿಯ ಪುತ್ರಿ ಕೂಡ ತಾಯಿಯ ಆರೋಪಗಳು ನಿಜವೆಂದು ಹೇಳಿಕೆ ನೀಡಿದ್ದಾಳೆ. ಯುವತಿಯನ್ನು ದೆಹಲಿಯ ಮಹಿಳಾ ಆಯೋಗ ಹಾಗೂ ಪೊಲೀಸರು ಜಂಟಿಯಾಗಿ ರಕ್ಷಿಸಿದ್ದು, ಆಕೆಯನ್ನು ಪಶ್ಚಿಮ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಆದರೆ ಪ್ರಕರಣದ ಹಿನ್ನೆಲೆಯಲ್ಲಿ ರಾಜಕೀಯ ಪ್ರಭಾವ ಇರುವುದರಿಂದ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸದಿರುವುದರ ಬಗ್ಗೆ ಮಹಿಳಾ ಆಯೋಗ ಪೊಲೀಸರಿಂದ ವಿವರಣೆಯನ್ನು ಕೋರಿದೆ. (ಏಜೆನ್ಸೀಸ್)
ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?