ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ರಚನೆಗೆ ಮುಂದಾಗಿದ್ದನ್ನು ಖಂಡಿಸಿ ಕರವೇ (ಶಿವರಾಮೇಗೌಡ ಬಣ) ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ವೇದಿಕೆ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಪ್ರಾಧಿಕಾರ ರಚನೆಗೆ ಬೇಡಿಕೆ ಇಲ್ಲದಿದ್ದರೂ ಸರ್ಕಾರ ಮರಾಠ ಪ್ರಾಧಿಕಾರ ಸ್ಥಾಪನೆಗೆ ಮುಂದಾಗಿರುವುದು ಖಂಡನೀಯ. ಇದು ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈಹಾಕಿದಂತಿದೆ. ಈಗಾಗಲೇ ಕನ್ನಡಿಗರು ಹಲವಾರು ತೊಂದರೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಕರ್ನಾಟಕ ಸರ್ಕಾರ ಮರಾಠಿಗರಿಗೆ ರತ್ನಗಂಬಳಿ ಹಾಕುವ ಕೆಲಸ ಮಾಡುತ್ತಿದೆ. ಕೂಡಲೇ ಮರಾಠ ಪ್ರಾಧಿಕಾರ ರಚನೆ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ತಹಸೀಲ್ದಾರ್ ಶರಣಮ್ಮಗೆ ಮನವಿ ಸಲ್ಲಿಸಿದರು.
ಕಾರ್ಯಕರ್ತರಾದ ವಿಶ್ವನಾಥ, ರಮೇಶ, ಮಂಜುನಾಥ, ಪಕ್ಕೀರಪ್ಪ, ವೀರೇಶ್, ಹುಲ್ಮನಿ ಮಂಜುನಾಥ, ಪಾಂಡುನಾಯ್ಕ, ಲೋಕೇಶ, ಹನುಮಂತ, ಕಾಳೇಶ್, ಕರಿಯಪ್ಪ, ತಿಪ್ಪಣ್ಣ, ನಾಗರಾಜ, ಕಾಸಿಂ, ಕಡ್ಲೆಪ್ಪ ಇತರರಿದ್ದರು.