ಬೈಲಹೊಂಗಲ: ಮಹಿಳಾ ಸಮಾಜಕ್ಕೆ ಬಹುದೊಡ್ಡ ಪ್ರೇರಣೆಯಾಗಿರುವ ವೀರವನಿತೆ ಬೆಳವಡಿ ಮಲ್ಲಮ್ಮಳ ಶೌರ್ಯ, ಸಾಹಸ, ನಾಡ ಪ್ರೇಮವನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ತಹಸೀಲ್ದಾರ್ ಸಚ್ಚಿದಾನಂದ ಕೂಚನೂರ ಹೇಳಿದರು.
ಪಟ್ಟಣದ ಚನ್ನಮ್ಮನ ವೃತ್ತದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ವಿಜಯ ಜ್ಯೋತಿ ವಾಹನಕ್ಕೆ ಮಂಗಳವಾರ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿ ಅವರು ಮಾತನಾಡಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುತ್ತಿರುವ ಮಲ್ಲಮ್ಮನ ಉತ್ಸವ ಈ ನಾಡಿನ ಜನರ ಸ್ವಾಭಿಮಾನದ ಸಂಕೇತವಾಗಿದೆ. ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು. ಯುವ ಪೀಳಿಗೆ ಮಲ್ಲಮ್ಮನ ಜೀವನ ಚರಿತ್ರೆ ಓದಿ ತಿಳಿಯಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ತಾಪಂ ಇಒ ಸುರೇಶ ಕಂದಕೂರ, ಸಹಾಯಕ ನಿರ್ದೇಶಕ ಸುರೇಶ ಪಾಟೀಲ, ಶಿರಸ್ತೆದಾರ ಜಿತೇಂದ್ರ ನಿಡೋಣಿ, ಕಂದಾಯ ನಿರೀಕ್ಷಕ ಬಿ.ಬಿ.ಬೋರಗಲ್ಲ, ಗ್ರಾಮಲೆಕ್ಕಾಧಿಕಾರಿ ಪರಮಾನಂದ ಕಮ್ಮಾರ, ಎಪಿಎಂಸಿ ಸುನೀಲ ಗೋಡಬೊಲೆ, ರಮೇಶ ಹಿಟ್ಟಣಗಿ, ಬಿ.ಐ.ಗುಡಿಮನಿ, ಸೋಮನಿಂಗ ದೊಡವಾಡ, ಮಡಿವಾಳ ಕಲಾದಗಿ ಇತರರಿದ್ದರು.