ಸಾಗರ: ಸತತ ಏಳು ವರ್ಷ ಶೇ.100 ಫಲಿತಾಂಶ ಪಡೆದಿರುವುದರ ಹಿಂದೆ ಪರಿಶ್ರಮವಿದೆ. ಈ ಶ್ರದ್ಧೆ ಮತ್ತು ಪರಿಶ್ರಮ ಮುಂದುವರಿದರೆ ಮುಂದೆಯೂ ಶೇ.100 ಫಲಿತಾಂಶ ಪಡೆಯಲು ಸಾಧ್ಯ ಎಂದು ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ ಹೇಳಿದರು.
ಸಾಗರದ ನೆಹರು ಮೈದಾನದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಬುಧವಾರ 2022-23ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆಯಲು ಕಾರಣರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
ಸತತ ಶೇ.100 ಫಲಿತಾಂಶ ಪಡೆಯುವುದು ಸಣ್ಣ ವಿಷಯವಲ್ಲ. ಶಿಕ್ಷಕರು, ಪಾಲಕರು, ಮಕ್ಕಳು, ಶಾಲಾಭಿವೃದ್ಧಿ ಸಮಿತಿ ಇದಕ್ಕೆ ತೋರಿಸಿದ ಬದ್ಧತೆಯೇ ಕಾರಣ. ಈ ಫಲಿತಾಂಶ ಸರಣಿಯು ಹೀಗೆಯೇ ಮುಂದುವರಿಯಬೇಕು. ಈ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವ ಮಕ್ಕಳು ಇದೇ ಸಾಧನೆ ಮಾಡಬೇಕು ಎಂದರು.
ಮುಖ್ಯ ಶಿಕ್ಷಕ ದತ್ತಾತ್ರೇಯ ಭಟ್ ಮಾತನಾಡಿ, ಕಳೆದ ವರ್ಷ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ಮಕ್ಕಳನ್ನು ಸನ್ಮಾನಿಸುವ ಮೂಲಕ ಈ ವರ್ಷದ ಮಕ್ಕಳಿಗೆ ಪ್ರೇರಣೆ ಸಿಗಲಿ ಎನ್ನುವುದು ನಮ್ಮ ಉದ್ದೇಶ. 2011-12ರಲ್ಲಿ ಆರಂಭವಾದ ಉರ್ದು ಪ್ರೌಢಶಾಲೆ ಅಲ್ಪಸಂಖ್ಯಾತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದೆ. ಮುಂದಿನ ದಿನಗಳಲ್ಲೂ ಶಾಲೆಯನ್ನು ಶೈಕ್ಷಣಿಕವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಆರ್.ಸನಾವುಲ್ಲಾ, ಪತ್ರಕರ್ತ ರಮೇಶ್ ಹೆಗಡೆ ಗುಂಡೂಮನೆ ಇತರರಿದ್ದರು.