ಬೆಂಗಳೂರು: ರಾಜಧಾನಿ ಬೆಂಗಳೂರು ಸುತ್ತಮುತ್ತ ಕಳೆದೆರಡು ದಿನಗಳಿಂದ ಮಂಜು ಮುಸುಕಿದ ವಾತಾವರಣವಿದ್ದು, ದಿನದಿಂದ ದಿನಕ್ಕೆ ಚಳಿ ಹೆಚ್ಚುತ್ತಿದೆ. ಮುಂಜಾನೆ ಮತ್ತು ಸಂಜೆಯಾಗುತ್ತಿದ್ದಂತೆ ಮೈನಡುಗಿಸುವ ಪರಿಸ್ಥಿತಿ ಇದ್ದು, ಜನ ಮನೆಯಿಂದ ಹೊರ ಬರಲು ಹಿಂದೆ ಮುಂದೆ ನೋಡುವಂತಾಗಿದೆ.
ಇದನ್ನೂ ಓದಿ: ಭಾರತ- ಮಾಲ್ಡೀವ್ಸ್ ವಿವಾದದ ಬೆನ್ನಲ್ಲೇ ಲಕ್ಷದ್ವೀಪದಲ್ಲಿ ತಲೆ ಎತ್ತಲಿವೆ ಟಾಟಾದ 2 ತಾಜ್ ರೆಸಾರ್ಟ್ಸ್..
ಕರಾವಳಿ ಮತ್ತು ದಕ್ಷಿಣ ಒಳನಾಡಿಗಿಂತ ಉತ್ತರ ಒಳನಾಡಿನಲ್ಲಿ ಕೆಲವೊಂದು ಕಡೆಗಳಲ್ಲಿ ಚಳಿ ಪ್ರಭಾವ ಬೀರಿದೆ.
ರಾಜ್ಯ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಳೆ ಮುನ್ಸೂಚನೆ ಇಲ್ಲ. ಬಹುತೇಕ ಕಡೆ ಒಣಹವೆ ಮುಂದುವರಿದಿದೆ. ಜ.15 ಮತ್ತು ಜ.16ರಂದು ಇದೇ ವಾತಾರಣ ಇರಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆ ಉಷ್ಣಾಂಶ ಸಾಮಾನ್ಯಕ್ಕಿಂತ 3.1 ಡಿಗ್ರಿ ಸೆಲ್ಸಿಯಸ್ ನಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗಲಿದೆ. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಅತಿ ಕಡಿಮೆ ಉಷ್ಣಾಂಶ 13.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಜ.14 ರಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಬೆಳಗ್ಗೆ ಮತ್ತು ಸಂಜೆ ಮಂಜು ಮುಸುಕಿದ ವಾತಾವರಣ ಇದ್ದು, ಜ.15 ಕೂಡ ಇದೇ ಪರಿಸ್ಥಿತಿ ಇರಲಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.