ಕೆ.ಆರ್.ನಗರ: ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಪಟಾಕಿಗಳನ್ನು ಶನಿವಾರ ಮುಟ್ಟುಗೋಲು ಹಾಕಿಕೊಂಡಿರುವ ಪಟ್ಟಣ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಮನೆಯೊಂದರಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಸಂಗ್ರಹಿಸಿಟ್ಟಿದ್ದ ಅಂದಾಜು 4 ಲಕ್ಷ ರೂ. ಮೌಲ್ಯದ 1200 ಕೆಜಿ ಪಟಾಕಿಯನ್ನು ಪೊಲೀಸರು ವಶಕ್ಕೆ ಪಡೆದರು. ಜತೆಗೆ ಮನೆ ಮೇಲಂತಸ್ತಿನಲ್ಲಿದ್ದ ವಿವಿಧ ಬಗೆಯ ಪಟಾಕಿಗಳನ್ನು ಹೊಂದಿದ್ದ ಬೃಹತ್ ಗಾತ್ರದ ರಟ್ಟಿನ ಬಾಕ್ಸ್ಗಳು ಹಾಗೂ ದಾಸ್ತಾನನ್ನು ಕಂಡು ಅಧಿಕಾರಿಗಳು ನಿಬ್ಬೆರಗಾಗಿದ್ದಾರೆ.
ಆರೋಪಿಗಳಾದ ಲೋಕೇಶ್ ಮತ್ತು ರವಿನಂದನ್ ಎಂಬುವರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿರುವ ಪೊಲೀಸರು, ಭಾರತೀಯ ಸ್ಫೋಟಕ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 266 ಕಾಯ್ದೆಯಡಿ ದೂರು ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕೆ.ಆರ್.ನಗರ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಪಿ.ಪಿ.ಸಂತೋಷ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ನಿರೀಕ್ಷಕರಾದ ಆರ್.ಧನ್ರಾಜ್, ನಂಜಪ್ಪ, ಅಗ್ನಿ ಶಾಮಕದಳದ ಅಧಿಕಾರಿ ಲಕ್ಷ್ಮೀಕಾಂತ್ ಜಾಧವ್, ಪುರಸಭಾ ಆರೋಗ್ಯ ನಿರೀಕ್ಷಕ ರಾಜೇಂದ್ರ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಶಶಿಕುಮಾರ್, ಪೊಲೀಸ್ ಸಿಬ್ಬಂದಿ ಮಂಜು, ಕೆಂಪರಾಜು, ಗಣೇಶ್, ಸುಧಾರಾಣಿ, ಚಾಲಕ ಆಲಿ ಇನ್ನಿತರರಿದ್ದರು.