ಮಂಗಳೂರು: ನಗರದ ಪಿವಿಎಸ್ ವೃತ್ತದ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿ ಕಾರಿನ ಮುಂಭಾಗ ಭಾಗಶಃ ಸುಟ್ಟಿದೆ.
ಪಿವಿಎಸ್ ಕಡೆಯಿಂದ ನವಭಾರತ ವೃತ್ತದ ಕಡೆಗೆ ಹೋಗುತ್ತಿದ್ದ ಕಾರಿನ ಮುಂಭಾಗದಲ್ಲಿ ಹೊಗೆ ಕಂಡ ಚಾಲಕ ಕೂಡಲೇ ವಾಹನ ನಿಲ್ಲಿಸಿದರು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಬ್ಯಾಟರಿ ಬಳಿ ಷಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆ ವೇಳೆ ಕಾರಿನಲ್ಲಿ ಚಾಲಕ ಸಹಿತ ಇಬ್ಬರಿದ್ದರು ಎಂದು ತಿಳಿದುಬಂದಿದೆ.
ಮಾ.29ರಂದು ರಾತ್ರಿ ಶಕ್ತಿನಗರದ ಪಾರ್ಕ್ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟಿತ್ತು. ಮಹಿಳೆಯೊಬ್ಬರು ಕಾರಿನಲ್ಲಿ ಮೊಬೈಲ್ ಚಾರ್ಜ್ಗೆ ಇಟ್ಟು ಪಾರ್ಕ್ಗೆ ಹೋಗಿ ವಾಪಸ್ ಬರುವಾಗ ಮೊಬೈಲ್ ಚಾರ್ಜ್ ಇಟ್ಟ ಸ್ಥಳದಲ್ಲಿ ಬೆಂಕಿ ಕಾಣಸಿಕೊಂಡು, ಕಾರಿಗೆ ವ್ಯಾಪಿಸಿತ್ತು.