More

    ಮೈಸೂರಿನಲ್ಲಿ ಚಿತ್ರನಗರಿ ಕಾಮಗಾರಿ ಇದೇ ವರ್ಷ ಆರಂಭ: ಸಿಎಂ ಭರವಸೆ

    ಬೆಂಗಳೂರು: ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚಿತ್ರನಗರಿ ಕಾಮಗಾರಿಯನ್ನು ಇದೇ ವರ್ಷ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

    ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿರುವ ನಟಸಾರ್ವಭೌಮ ಡಾ.ರಾಜಕುಮಾರ್ ಅವರ 94ನೇ ಜನ್ಮದಿನಾಚರಣೆ ಹಾಗೂ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಭರವಸೆ ನೀಡಿದರು.

    ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಡಾ.ರಾಜಕುಮಾರ್ ಅವರ ಕುರಿತು ಮಾತನಾಡಿದ ಸಿಎಂ, ರಾಜಕುಮಾರ್ ಅವರು ಕಾಡುಗಳ್ಳ ವೀರಪ್ಪನ್​​ನಿಂದ ಬಂಧಮುಕ್ತರಾದ ಬಳಿಕದ ಮಾತುಕತೆಗಳಲ್ಲಿ ಯಾವುದೇ ಕಹಿ ಘಟನೆಗಳನ್ನು ಸ್ಮರಿಸದೆ, ಕೆಟ್ಟ ವಿಚಾರಗಳನ್ನು ಪ್ರಸ್ತಾಪಿಸದೆ ಉದಾತ್ತ ಮನೋಭಾವ ತೋರಿದ್ದರು ಎಂದು ಕೊಂಡಾಡಿದರು.

    ಯಾರು ಮನವಿ ಅಥವಾ ಬೇಡಿಕೆ ಸಲ್ಲಿಸದೇ ಇದ್ದರೂ ಪ್ರಸಕ್ತ 2022-23ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ 125 ಕನ್ನಡ ಮತ್ತು ಪ್ರಾದೇಶಿಕ ಚಲನಚಿತ್ರಗಳಿಗೆ ಬದಲಾಗಿ 200 ಚಲನಚಿತ್ರಗಳಿಗೆ ಸಹಾಯಧನ ನೀಡಲು ಅವಕಾಶ ಕಲ್ಪಿಸಿರುವುದನ್ನು ಸಿಎಂ ಪುನರುಚ್ಚರಿಸಿದರು.

    ಜೀವಿತಾವಧಿ ಸಾಧನೆಗಾಗಿ ಖ್ಯಾತ ನಟಿ ಲಕ್ಷ್ಮೀಗೆ ಡಾ.ರಾಜಕುಮಾರ್ ಪ್ರಶಸ್ತಿ, ಖ್ಯಾತ ನಿರ್ದೇಶಕ ಎಸ್.ನಾರಾಯಣ್​ಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು.

    ಮೈಸೂರಿನಲ್ಲಿ ಚಿತ್ರನಗರಿ ಕಾಮಗಾರಿ ಇದೇ ವರ್ಷ ಆರಂಭ: ಸಿಎಂ ಭರವಸೆ

    ಡಾ.ರಾಜಕುಮಾರ್ ಅವರ ಹೆಸರಿನ ಪ್ರಶಸ್ತಿ ಲಭಿಸುತ್ತಿರುವುದು ರಾಜ್ ಅವರ ಆಶೀರ್ವಾದ ಲಭಿಸಿದಂತೆ ಎಂದು ನಟಿ ಲಕ್ಷ್ಮೀ ಭಾವುಕರಾಗಿ ನುಡಿದರು. ಕೆಲಸ ಕಲಿಯಲು ಪುಟ್ಟಣ್ಣ ಕಣಗಾಲ್ ಅವರಲ್ಲಿ ತಾವು ಅವಕಾಶ ಕೋರಿದ ದಿನಗಳನ್ನು ಸ್ಮರಿಸಿದ ನಟ-ನಿರ್ದೇಶಕ ಎಸ್.ನಾರಾಯಣ್, ಪುಟ್ಟಣ್ಣ ಅವರ ಹೆಸರಿನ ಪ್ರಶಸ್ತಿ ದೊರೆತಿರುವುದು ತಮ್ಮ ಸೌಭಾಗ್ಯ ಹಾಗೂ ಈ ದಿನ ತಮ್ಮ ಪಾಲಿನ ಸುದಿನ ಎಂದರು.

    ಕನ್ನಡ ಚಲನಚಿತ್ರ ರಂಗಕ್ಕೆ ಹಲವು ಸದಭಿರುಚಿಯ ಚಿತ್ರಗಳ ಕೊಡುಗೆ ನೀಡಿದ ನಿರ್ಮಾಪಕ ಹಾಗೂ ವಿಷ್ಣುವರ್ಧನ್ ಪ್ರಶಸ್ತಿಗೆ ಭಾಜನರಾಗಿದ್ದ ಜಿ.ಎನ್.ಲಕ್ಷ್ಮೀಪತಿ ಅವರು ನಿಧನರಾಗಿರುವುದರಿಂದ ಅವರ ಪುತ್ರ ರಾಮಪ್ರಸಾದ್ ತಮ್ಮ ತಂದೆಯ ಪರವಾಗಿ ಮುಖ್ಯಮಂತ್ರಿಯವರಿಂದ ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಿದರು.

    ವಿಶೃತ ನಾಯ್ಕ ಅವರಿಗೆ ಅತ್ಯುತ್ತಮ ನಟ, ತಾರಾ ಅನೂರಾಧಾಗಎ ಅತ್ಯುತ್ತಮ ನಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ರಾಜಕುಮಾರ ನಿರ್ದೇಶಕ ಸಂತೋಷ್ ಆನಂದರಾಮ್​ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ಇತರೆ ತಾಂತ್ರಿಕ ವರ್ಗದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಡಾ.ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರೂಪಾಯಿ ನಗದು, ಐವತ್ತು ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಫಲಕ, ಸ್ಮರಣಿಕೆ ಮತ್ತು ಫಲ ತಾಂಬೂಲ ನೀಡಿ ಮುಖ್ಯಮಂತ್ರಿಯವರು ಗೌರವಿಸಿದರು.

    ನಟ ರಾಘವೇಂದ್ರ ರಾಜಕುಮಾರ್ ಅವರು ತಮ್ಮ ತಂದೆ ರಾಜಕುಮಾರ್ ಹಾಗೂ ಸಹೋದರ ಪುನೀತ್ ರಾಜಕುಮಾರ್ ಅವರ ಸರಳತೆ ಮತ್ತು ಮಾನವೀಯ ಗುಣಗಳ ಕುರಿತು ಮಾತನಾಡಿದರು.

    ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್. ಜೈರಾಜ್, ಹೆಸರಾಂತ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮಾರಂಭಕ್ಕೆ ಮುನ್ನ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಪ್ರೇಕ್ಷಕರ ಮನತಣಿಸಿತು.

    ಇಂಡಿಯಾ ಟ್ರೆಂಡಿಂಗ್​ನಲ್ಲಿ #DrRajkumar; ಡಾ.ರಾಜ್​ಗೆ ಜನ್ಮದಿನದ ಶುಭಾಶಯಗಳ ಸುರಿಮಳೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts