ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಡಿ.ಸಿ.ಶಶಿಧರ್ ರಾಜೀನಾಮೆಯಿಂದ ತೆರವಾದ ತಾಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದೆ. ಬಹುಮತ ಪಡೆದ ಕಾಂಗ್ರೆಸ್ ಈಗಾಗಲೇ 5 ವರ್ಷಗಳ ಅಧಿಕಾರಾವಧಿಯಲ್ಲಿ 4 ವರ್ಷಕ್ಕೆ ಇಬ್ಬರು ಅಧ್ಯಕ್ಷರನ್ನು ಬದಲಾವಣೆ ಮಾಡಿದೆ. ಈಗ ಉಳಿದ ಒಂದು ವರ್ಷಕ್ಕೆ ನಾಲ್ವರಲ್ಲಿ ಪೈಪೋಟಿ ಶುರುವಾಗಿದೆ.
ಕೊನಘಟ್ಟ ತಾಪಂ ಕ್ಷೇತ್ರದಿಂದ ಆಯ್ಕೆಯಾದ ನಾರಾಯಣಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರಿಗೆ ಶಾಸಕ ಟಿ.ವೆಂಕಟರಮಣಯ್ಯ, ಹಿರಿಯ ನಾಯಕ ಆರ್.ಜಿ.ವೆಂಕಟಾಚಲಯ್ಯ ಸೇರಿ ಹಲವು ಮುಖಂಡರ ಬೆಂಬಲವಿದೆ. ಈ ಬಾರಿ ನಾಯಕರು ಆಶೀರ್ವಾದ ಮಾಡಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ.
ವರದನಹಳ್ಳಿ ಕ್ಷೇತ್ರದಿಂದ ಆಯ್ಕೆಯಾದ ಚಿಕ್ಕ ಆಂಜಿನಪ್ಪ. ಬಾಶೆಟ್ಟಿಹಳ್ಳಿ ಭಾಗದಿಂದ ಈವರೆಗೆ ಯಾರೂ ಕೂಡ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ, ಈ ಪ್ರದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕಾದರೆ ಇಲ್ಲಿನವರಿಗೆ ಅಧಿಕಾರ ನೀಡಬೇಕಾಗಿದೆ. ಅಧಿಕಾರ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ ಜತೆಗೆ ಪಕ್ಷ ಬಲಪಡಿಸುವೆ ಎನ್ನುತ್ತಿದ್ದಾರೆ.
ಮಹಿಳಾ ಕೋಟಾದಿಂದ ತಿಪ್ಪಾಪುರ ಕ್ಷೇತ್ರದ ರತ್ನಮ್ಮಜಯರಾಂ ರೇಸ್ನಲ್ಲಿದ್ದಾರೆ. ನಾಲ್ಕನೇ ಅಭ್ಯರ್ಥಿ ಹುಲಿಕುಂಟೆ ಕ್ಷೇತ್ರದ ಮಂಜುನಾಥ್ ಬಿಜೆಪಿಯಿಂದ ಗೆದ್ದು, ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅಧ್ಯಕ್ಷ ಗಾದಿ ಆಕಾಂಕ್ಷಿಯಾಗಿದ್ದಾರೆ.
ಮಹಿಳೆಗೆ ಒಲಿಯುವುದೇ ಅಧ್ಯಕ್ಷ ಸ್ಥಾನ?: 22 ಸ್ಥಾನಗಳ ಪೈಕಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಇದರಲ್ಲಿ ಒಟ್ಟು 9 ಕ್ಷೇತ್ರದಲ್ಲಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಹೀಗಾಗಿ ಈವರೆಗೆ ಮಹಿಳೆಯರಿಗೆ ಅವಕಾಶ ನೀಡಿಲ್ಲ. ಈ ಬಾರಿ ಮಹಿಳೆಯರಿಗೆ ಅವಕಾಶ ಕೊಡಬೇಕಿದೆ ಎಂಬ ಕೂಗು ಪಕ್ಷದಲ್ಲೇ ಜೋರಾಗಿದೆ. ಈ ಮಧ್ಯೆ ಮಹಿಳಾ ಕೋಟಾದಡಿ ರತ್ನಮ್ಮಜಯರಾಂ ಕಾಂಗ್ರೆಸ್ ಮುಖಂಡರ ಮೇಲೆ ಪ್ರಬಲ ಒತ್ತಡ ಹಾಕುತ್ತಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ಗೆ: ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾದ ಹುಲಿಕುಂಟೆ ಕ್ಷೇತ್ರದ ಮಂಜುನಾಥ್ ಈಗ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. 15 ಸ್ಥಾನದಲ್ಲಿದ್ದ ಕಾಂಗ್ರೆಸ್ ಬಲ 16ಕ್ಕೇರಿದೆ. ಇವರೂ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ತಾಲೂಕಿನ ಕಾಂಗ್ರೆಸ್ ಭೀಷ್ಮ ಎಂದೇ ಹೆಸರಾಗಿರುವ ಆರ್.ಜಿ.ವೆಂಕಟಾಚಲಯ್ಯ, ಶಾಸಕ ವೆಂಕಟರಮಣಯ್ಯ ತೀರ್ಮಾನವೇ ಅಂತಿಮವಾಗಿದ್ದು, ಇಬ್ಬರ ಮೇಲೂ ಆಕಾಂಕ್ಷಿಗಳು ತಮ್ಮದೇ ಆದ ಮುಖಂಡರ ಮೂಲಕ ಒತ್ತಡ ಹೇರುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.