ದೊಡ್ಡಬಳ್ಳಾಪುರ: ರೈತರ ಬೆಳೆ ಹಾನಿ ಕುರಿತ ಮಾಹಿತಿ ಕೊಂಡಿಯಾಗಿರುವ ಎಫ್ಐಡಿ ತಂತ್ರಾಂಶ ಸರಿಪಡಿಸಲು ಒತ್ತಾಯಿಸಿ ರೈತ ಸಂಘದಿಂದ ಗುರುವಾರ ನಗರದ ತೋಟಗಾರಿಕಾ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಹೂವು ಬೆಳೆಗಾರರನ್ನೊಳಗೊಂಡಂತೆ ಇನ್ನಿತರ ರೈತರಿಗೆ ಸರ್ಕಾರದಿಂದ ದೊರೆಯಲಿರುವ ಸಹಾಯಧನಕ್ಕೆ ಆನ್ಲೈನ್ ಮೂಲಕ ಎಫ್ಐಡಿ ತಂತ್ರಾಂಶದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಈ ತಂತ್ರಾಂಶ ದೋಷಪೂರಿತವಾಗಿದೆ. ಎಫ್ಐಡಿಯಲ್ಲಿ ಹೆಸರು ಇಲ್ಲದ ರೈತರು ಜಮೀನು ಮಾಹಿತಿಯನ್ನು ತೋಟಗಾರಿಕಾ ಇಲಾಖೆಗೆ ನೀಡಿದರೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ದೂರಿದರು.
ಅಧಿಕಾರಿಗಳು ಯಾವುದೋ ಜಮೀನಿಗೆ ಭೇಟಿ ನೀಡಿ ಬೆಳೆಹಾನಿ ವಿವರ ಪಡೆದು ಸುಮ್ಮನಾಗುತ್ತಿದ್ದಾರೆ. ಉಳಿದಂತೆ ಅನೇಕ ರೈತರ ಮಾಹಿತಿ ಪಡೆಯಲಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರ ಬೆಳೆಹಾನಿ ವಿವರ ಪಡೆದು ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಮಾತನಾಡಿ, ಎಫ್ಐಡಿ ಪಟ್ಟಿಯಲ್ಲಿರದ ರೈತರ ಬೆಳೆಹಾನಿ ವಿವರಗಳನ್ನು ಅಧಿಕಾರಿಗಳು ಪಡೆಯಬೇಕು. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ತೂಬಗೆರೆ ಹೋಬಳಿ ಅಧ್ಯಕ್ಷ ಮುನಿನಾರಾಯಣಪ್ಪ, ಹೂವು ಬೆಳೆಗಾರ ಶ್ಯಾಸುಂದರ್ ಹಾಜರಿದ್ದರು.