ಬೆಂಗಳೂರು: ಆತಂಕಕಾರಿ ಘಟನೆಯೊಂದರಲ್ಲಿ ವಿಶ್ವ ತಾಯಂದಿರ ದಿನದಂದೇ ಪಾಪಿ ಮಗನೊಬ್ಬ ತಂದೆ-ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಜೆಪಿ ನಗರದ ಆರ್ಬಿಐ ಲೇಔಟ್ ಬಳಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಗೋವಿಂದಪ್ಪ, ಶಾಂತಮ್ಮ ಕೊಲೆಯಾದ ದುರ್ದೈವಿಗಳು. ಮದ್ಯದ ಅಮಲಿನಲ್ಲಿ ಮಗ ನವೀನ್ ಹರಿತವಾದ ಆಯುಧದಿಂದ ಹೊಡೆದು ತಂದೆ-ತಾಯಿಯನ್ನು ಕೊಲೆಗೈದಿದ್ದಾನೆ ಎಂದು ಶಂಕಿಸಲಾಗಿದೆ.
ಆರೋಪಿ ನವೀನ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ. ನಿನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದ ಆತ ಮದ್ಯಪಾನ ಮಾಡಿ ಮನೆಗೆ ಹಿಂದಿರುಗಿದ್ದ. ಈಗಾಗಲೇ ಮನೆಯಲ್ಲಿ ಹಲವು ವಿಚಾರಗಳಿಗೆ ಅಂತರಿಕ ಕಲಹವಿತ್ತಂತೆ, ಅದೇ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಕೋಣನಕುಂಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ನವೀನ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸಫೆಟ್ ಮಾತನಾಡಿ, ಹರಿತವಾದ ಆಯುಧದಿಂದ ಇರಿದು ವೃದ್ದ ದಂಪತಿ ಹತ್ಯೆ ನಡೆಸಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಮೃತ ಶಾಂತಮ್ಮ ಗುಮಾಸ್ತೆಯಾಗಿದ್ದರು. ಮೃತ ಗೋವಿಂದಪ್ಪ ಸರ್ಕಾರಿ ನಿವೃತ್ತ ನೌಕರರಾಗಿದ್ದರು. ದುಷ್ಕರ್ಮಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ. ಘಟನೆ ಸಂಬಂಧ ಏರಿಯಾದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದಿದ್ದು ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಬೇರೆಯವರೊಂದಿಗಿನ ಹರಟೆ ಈ ರಾಶಿಯ ಸಂಗಾತಿಯ ಮುನಿಸಿಗೆ ಕಾರಣವಾಗಲಿದೆ