ಶ್ರೀನಗರ: ಸಂವಿಧಾನದ 370ನೇ ವಿಧಿಯನ್ನು ಮತ್ತೆ ಚಾಲ್ತಿಗೆ ತರುವ ಏಕೈಕ ಉದ್ದೇಶದೊಂದಿಗೆ ರಚನೆಯಾಗಿರುವ ಗುಪ್ಕಾರ್ ಡಿಕ್ಲರೇಷನ್ ಜನತಾ ಮೈತ್ರಿಕೂಟದ ಸಾರಥ್ಯ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೆಗಲೇರಿದೆ.
ಶನಿವಾರ ನಡೆದ ಸಭೆಯಲ್ಲಿ ಫಾರೂಕ್ ಅಬ್ದುಲ್ಲಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಜನತಾ ಪ್ರಜಾಸತ್ತಾತ್ಮಕ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಧುರೀಣ ಮಹಮದ್ ಯೂಸುಫ್ ತರಿಗಾಮಿ ಮೈತ್ರಿಕೂಟದ ಸಂಚಾಲಕರಾಗಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಸೇನೆಯ ಚೀನಾ ನಿರ್ಮಿತ ಕ್ವಾಡ್ಕಾಪ್ಟರ್ನ್ನು ಹೊಡೆದುರುಳಿಸಿತು ಸೇನೆ
ಮೆಹಬೂಬಾ ಮುಫ್ತಿ ಮನೆಯಲ್ಲಿ ಸಭೆ ನಡೆಸಿದ ನಾಯಕರು, ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದ ಧ್ವಜವನ್ನು ಮೈತ್ರಿಕೂಟದ ಲಾಂಛನವಾಗಿ ಅಂಗೀಕರಿಸಿದರು. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ರಾಜ್ಯ ಸ್ಥಾನಮಾನ ತೆಗೆದು ಹಾಕಿದ ನಂತರದ ಒಂದು ವರ್ಷದಲ್ಲಿ ಜಮ್ಮು-ಕಾಶ್ಮೀರದಲ್ಲಿನ ಆಡಳಿತ ಪರಿಸ್ಥಿತಿ ಬಗ್ಗೆ ಒಂದು ತಿಂಗಳೊಳಗೆ ಶ್ವೇತಪತ್ರ ಪ್ರಕಟಿಸಲು ಕೂಟ ನಿರ್ಧರಿಸಿದೆ. (ಏಜೆನ್ಸೀಸ್)