ಕುಮಟಾ: ರೈತರು ತಮ್ಮ ಬೆಳೆಗಳ ವ್ಯಾಪಾರ, ವಹಿವಾಟು ಮಾಡುವ ಸಂದರ್ಭದಲ್ಲಿ ಅವರಿಗೆ ಉಪಯುಕ್ತವಾದ ರಸ್ತೆ ಸಂಪರ್ಕವನ್ನೇ ಸಂಪೂರ್ಣವಾಗಿ ನಿಷೇಧಿಸಿದರೆ ಸಾವಿರಾರು ರೈತರಿಗೆ ಅನ್ಯಾಯವಾಗುತ್ತದೆ ಎಂದು ಕುಮಟಾ-ಶಿರಸಿ ರಸ್ತೆ ಸಂಪರ್ಕ ನಿಷೇಧಿಸಿರುವ ಜಿಲ್ಲಾಡಳಿತದ ಕ್ರಮ ಕುರಿತು ಪರಿಶೀಲಿಸಬೇಕು ಎಂದು ಆಗ್ರಹಿಸಿ ಶಾಸಕ ದಿನಕರ ಶೆಟ್ಟಿ ಅವರಿಗೆ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಬಹಳಷ್ಟು ರೈತರು ಶಿರಸಿ ವ್ಯಾಪಾರಿ ಕೇಂದ್ರವನ್ನೇ ಅವಲಂಬಿಸಿದ್ದಾರೆ. ರೈತರ ಬೆಳೆ ಶಿರಸಿಗೆ ಸಾಗಿಸಲು ಮಾತ್ರವಲ್ಲದೆ, ಘಟ್ಟದ ಮೇಲಿನ ಭಾಗದಿಂದ ಕೃಷಿ ಉತ್ಪನ್ನಗಳು, ತರಕಾರಿ ಮುಂತಾದವುಗಳನ್ನು ಸಾಗಿಸಲು ನೂರಾರು ಕಿ.ಮೀ. ಸುತ್ತುಬಳಸಿ ಬರುವುದರಿಂದ ಹಲವು ಆಯಾಮಗಳಲ್ಲಿ ಸಮಸ್ಯೆ ಹೆಚ್ಚುತ್ತದೆ. ಕುಮಟಾ-ಸಂತೆಗುಳಿ-ಸಿದ್ದಾಪುರ ರಸ್ತೆ ತೀವ್ರ ತಿರುವು, ಇಕ್ಕಟ್ಟಿನಿಂದ ಕೂಡಿದ್ದು, ಭಾರೀ ವಾಹನಗಳು ಕೂಡ ಸಂಚರಿಸಿದರೆ ಅಪಾಯ ಇದೆ. ಯಾಣ-ದೇವನಳ್ಳಿ-ವಡ್ಡಿಘಾಟ ರಸ್ತೆಯಲ್ಲೂ ಭಾರೀ ವಾಹನ ಸಂಚಾರ ಕಷ್ಟಸಾಧ್ಯ. ಆದರೆ, ಆನೆಗುಂದಿ-ಯಾಣ ರಸ್ತೆಯಿಂದ ಕೇವಲ 2.5 ಕಿಮೀ ಚಿಕ್ಕ ಕೊಂಡಿರಸ್ತೆಯಲ್ಲಿ ಸಾಗಿದರೆ ವಡ್ಡಿಘಾಟ ರಸ್ತೆ ಸೇರಬಹುದಾಗಿದ್ದು, ಅಲ್ಲಿಂದ ಶಿರಸಿಗೆ ಕೇವಲ 34 ಕಿಮೀ ಅಂತರವಿದೆ. ಈ 2.5 ಕಿಮೀ ಕೊಂಡಿರಸ್ತೆ ಸರಿಪಡಿಸಬೇಕು. ಮುಖ್ಯವಾಗಿ ಕುಮಟಾ-ಶಿರಸಿ ರಸ್ತೆಯಲ್ಲಿ ಲಘುವಾಹನ ಸಂಚಾರಕ್ಕೆ ಅವಕಾಶ ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮುಖ್ಯವಾಗಿ ಕುಮಟಾ-ಶಿರಸಿ ರಸ್ತೆಗಾಗಿ ರೈತರ ಮಾಲ್ಕಿ ಜಾಗದ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ. ಈ ಪ್ರಕ್ರಿಯೆಗೆ ಕನಿಷ್ಠ 5-6 ತಿಂಗಳಾದರೂ ಬೇಕಿರುವುದರಿಂದ ಭೂಮಾಲೀಕರಿಗೆ ಯೋಗ್ಯ ಪರಿಹಾರ ವಿತರಿಸದೇ ಕಾಮಗಾರಿ ನಿರ್ವಹಿಸುವುದು ಹೇಗೆ ಸಾಧ್ಯ ಎಂದು ಮನವಿಯಲ್ಲಿ ರೈತರು ಪ್ರಶ್ನಿಸಿದ್ದಾರೆ. ಆರ್.ಬಿ. ಅಂಬಿಗ, ಶ್ರೀಕಾಂತ ನಾಯ್ಕ, ತುಳಸು ಗೌಡ, ಜಿ.ಎಂ. ನಾಯ್ಕ ಇತರರಿದ್ದರು.