ರಾಂಚಿ : ಕ್ರಿಕೆಟ್ ಆಟಗಾರರೆಂದರೆ ನಮ್ಮ ಯುವಜನರಿಗೆ ಎಲ್ಲಿಲ್ಲದ ಅಭಿಮಾನ. ಅದೇ ಇಲ್ಲೊಬ್ಬ ಯುವಕ, ಕ್ರಿಕೆಟ್ ಪಟು ಎಂ.ಎಸ್.ಧೋನಿ ಬಗ್ಗೆ ಅಸಾಮಾನ್ಯ ಅಭಿಮಾನ ಪ್ರದರ್ಶಿಸಿದ್ದಾನೆ. ಈ ಯುವ ಅಭಿಮಾನಿ ತನ್ನ ಹಳ್ಳಿಯಿಂದ ಧೋನಿ ನಿವಾಸದವರೆಗೆ 16 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ತಲುಪಿದ್ದಾನೆ!
ಹರಿಯಾಣದ ಹಿಸಾರ್ ಜಿಲ್ಲೆಯ ಜಾಲನ್ ಖೇಡ ಗ್ರಾಮದ 18 ವರ್ಷದ ಅಜಯ್ ಗಿಲ್ ಎಂಬುವ ತನ್ನ ಹಳ್ಳಿಯಿಂದ ಧೋನಿಯವರ ರಾಂಚಿ ನಿವಾಸದವರೆಗೆ, ಅಂದರೆ ಸುಮಾರು 1,400 ಕಿಲೋಮೀಟರ್ ದೂರ, ನಡೆದುಕೊಂಡು ಬಂದಿದ್ದಾನೆ. ಗ್ರಾಮದ ಸಲೂನಿನಲ್ಲಿ ಕೆಲಸ ಮಾಡುವ ಈ ಯುವಕ ತಲೆಯ ಒಂದು ಕಡೆ ಧೋನಿ ಎಂದೂ, ಇನ್ನೊಂದು ಕಡೆ ಮಾಹಿ ಎಂದೂ ಕೂದಲಲ್ಲಿ ಡಿಸೈನ್ ಮಾಡಿಸಿಕೊಂಡಿದ್ದು, ತಾನು ತಂದಿದ್ದ ಭಾರತದ ಬಾವುಟಕ್ಕೆ ಧೋನಿ ಸಹಿ ಮಾಡಿಸಿಕೊಳ್ಳಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾನೆ.
ಆದರೆ “ತಮ್ಮ ಅಭಿಮಾನಿಯೊಂದಿಗೆ 10 ನಿಮಿಷವಾದರೂ ಮಾತಾಡೇ ಆಡ್ತಾರೆ” ಎಂಬ ವಿಶ್ವಾಸದಿಂದ ಬಂದಿದ್ದ ಈ ಯುವಕನಿಗೆ, ಸದ್ಯಕ್ಕೆ ನಿರಾಸೆ ಕಾದಿತ್ತು. ಕಾರಣ, ಯುಎಇಯಲ್ಲಿ ನಡೆಯುವ ಐಪಿಎಲ್ 2021 ಪಂದ್ಯಾವಳಿಗೆ ತೆರಳುವ ಸಲುವಾಗಿ, ಮಹೇಂದ್ರ ಸಿಂಗ್ ಧೋನಿ ಅವರು, ಅದಾಗಲೇ ಚೆನ್ನೈ ವಿಮಾನ ನಿಲ್ದಾಣದಲ್ಲಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಜಾಕ್ಲೀನ್ ಫರ್ನಾಂಡಿಸ್, ಸಚಿನ್ ತೆಂಡೂಲ್ಕರ್…. ಸೆಲೆಬ್ರಿಟಿಗಳ ಸ್ವಾತಂತ್ರ್ಯ ದಿನಾಚರಣೆಯ ಝಲಕ್ ಇಲ್ಲಿದೆ
ಧೋನಿ ವಾಪಸಾಗಲು ಇನ್ನೂ ಮೂರು ತಿಂಗಳು ಬೇಕು ಎಂದು ತಿಳಿಸಿದರೂ ಅವರನ್ನು ಭೇಟಿಯಾಗದೆ ಮನೆಗೆ ವಾಪಸ್ ಹೋಗುವುದಿಲ್ಲ ಎಂದು ಅವರ ಫಾರ್ಮ್ಹೌಸಿನ ಹೊರಗೆ ಅಜಯ್ ಹಟ ಹಿಡಿದು ನಿಂತಿದ್ದ. ಸ್ಥಳೀಯ ಬಿಸಿನೆಸ್ಮನ್ ಅನುರಾಗ್ ಚಾವ್ಲಾ ಎಂಬುವರು, ಮತ್ತೊಮ್ಮೆ ಧೋನಿಯನ್ನು ಕಾಣಲು ಬರುವಂತೆ ಆತನ ಮನವೊಲಿಸಿ, ದೆಹಲಿಗೆ ಏರ್ ಟಿಕೆಟ್ ಕೊಡಿಸಿ ವಾಪಸ್ ಕಳುಹಿಸಿದರು ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ. (ಏಜೆನ್ಸೀಸ್)