More

    ಕೌಟುಂಬಿಕ ಕಲಹದಿಂದ ದಂಪತಿ ಆತ್ಮಹತ್ಯೆ

    ಬೈಲಹೊಂಗಲ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಪತಿ ಗುರುನಾಥ ನಾರಾಯಣ ತಾವರೆ(46), ಪತ್ನಿ ಮೀನಾಕ್ಷಿ ಗುರುನಾಥ ತಾವರೆ (33) ಆತ್ಮಹತ್ಯೆ ಮಾಡಿಕೊಂಡ ದಂಪತಿ.

    ಘಟನೆ ಹಿನ್ನೆಲೆ: ಪಟ್ಟಣದ ಚನ್ನಮ್ಮ ಬಡಾವಣೆಯ 1ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಶಿಕ್ಷಕ ಗುರುನಾಥ ತಾವರೆ ಮೂಲತಃ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದವರು. ಆರು ತಿಂಗಳಿಂದ ತಾಲೂಕಿನ ಅಮಟೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗಾವಿ ನಗರದ ಮೀನಾಕ್ಷಿ ಅವರ ಜತೆ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ, ಪತ್ನಿ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು.

    ಈ ಹಿಂದೆ ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾ ಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಸೂಚನೆಯಂತೆ ಹೊಂದಾಣಿಕೆ ಜೀವನ ಸಾಗಿಸುವುದಾಗಿ ಒಪ್ಪಿಕೊಂಡು ಬೈಲಹೊಂಗಲ ಪಟ್ಟಣದ ಚನ್ನಮ್ಮ ಬಡಾವಣೆಯ 1ನೇ ಕ್ರಾಸ್‌ನ ಮನೆಯೊಂದರಲ್ಲಿ ವಾಸವಾಗಿದ್ದರು. ಪದೆ ಪದೇ ಪರಸ್ಪರ ಇಬ್ಬರು ಮುನಿಸಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಸಂಬಂಧಿಕರು, ಹಿರಿಯರು ತಿಳಿ ಹೇಳಿದರೂ, ಇಬ್ಬರ ನಡುವೆ ಕಲಹ ಕಡಿಮೆಯಾಗಿರಲಿಲ್ಲ.

    ಸೋಮವಾರ ತಡರಾತ್ರಿ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಮುನಿಸಿಕೊಂಡ ಶಿಕ್ಷಕ ಗುರುನಾಥ ಬೈಕ್ ತೆಗೆದುಕೊಂಡು ಪಟ್ಟಣದ ಹೊರ ವಲಯದ ಬೆಳಗಾವಿ ರಸ್ತೆಯ ಜಮೀನೊಂದರಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿದ ಪತ್ನಿ ಮನೆಯಲ್ಲಿಯೇ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾಳೆ. ಪತಿ, ಪತ್ನಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು, ಪೊಲೀಸ್ ಠಾಣೆ, ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಮಾವಣೆಗೊಡರು.

    ಮೃತ ದಂಪತಿಗೆ ಹತ್ತು ವರ್ಷದ ಮಗ, ಮೂರು ವರ್ಷದ ಮಗು ಇದೆ. ಕಂದಮ್ಮಗಳ ಗೋಳು ಕಂಡ ಸಾರ್ವಜನಿಕರು ಮಮ್ಮಲ ಮರಗಿದರು. ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಅದನ್ನು ಅಳಸಿ ಹಾಕಿದ ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದಾರೆ. ಸಿಪಿಐ ಮಂಜುನಾಥ ಕುಸಗಲ, ಪಿಎಸ್‌ಐ ಈರಪ್ಪ ರಿತ್ತಿ, ಎಎಸ್‌ಐ ಶೋಭಾ ಇಂಗಳಗಾವಿ ತನಿಖೆ ಪ್ರಾರಂಭಿಸಿದ್ದಾರೆ. ಬೈಲಹೊಂಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts