ಚೆನೈ: ತಮಿಳಿನ ಸ್ಟಾರ್ ನಟ ಸಿಂಬರಸನ್ ನಟನೆಯ ಪತ್ತು ತಲಾ ಚಿತ್ರ ವೀಕ್ಷಿಸಲು ಮಲ್ಟಿಫ್ಲೆಕ್ಸ್ಗೆ ಹೋಗಿದ್ದ ನಾರಿಕರುವ ಸಮುದಾಯದ ಅಲೆಮಾರಿ ಜನರನ್ನು ಸಿಬ್ಬಂದಿ ಸಿನಿಮಾ ವೀಕ್ಷಿಸಲು ಥಿಯೇಟರ್ ಒಳಗೆ ಬಿಡದಿರುವುದು ತಮಿಳುನಾಡಿನಲ್ಲಿ ಹೊಸ ವಿವಾದವನ್ನ ಹುಟ್ಟುಹಾಕಿದೆ.
ಚೆನೈನ ಕೋಯೆಂಬಾಡು ಪ್ರದೇಶದಲ್ಲಿರುವ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಮಲ್ಟಿಫ್ಲೆಕ್ಸ್ನಲ್ಲಿ ಘಟನೆ ನಡೆದಿದೆ. ನಾರಿಕರುವ ಸಮುದಾಯದ ಮಹಿಳೆ ಹಾಘೂ ಮಕ್ಕಳು ಟಿಕೆಟ್ ಖರೀದಿಸಿ ಚಿತ್ರವನ್ನ ವೀಕ್ಷಿಸಲು ಬಂದಿದ್ದರು. ಆದರೆ, ಟಿಕೆಟ್ ತಪಾಸಣೆ ವೇಳೆ ಸಿಬ್ಬಂದಿ ಇವರುಗಳನ್ನು ತಡೆದಿದ್ದು ಚಿತ್ರಮಂದಿರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿಲ್ಲ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು ಚಿತ್ರಮಂದಿರದ ಆಡಳಿತ ಮಂಡಳಿ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಸಿಕ್ಕ ಅವಕಾಶಗಳನ್ನು ಸಂಭ್ರಮಿಸಿ; ಕಮಲ್ ಹಾಸನ್ ಕರೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಸಂಸ್ಥೆ ಪತ್ತು ತಲಾ ಚಿತ್ರವು U/A ಪ್ರಮಾಣಪತ್ರ ಇರುವ ಸಿನಿಮಾ. ಚಿತ್ರವನ್ನು ವೀಕ್ಷಿಸಲು 12 ವರ್ಷಕ್ಕಿಂತ ವಯಸ್ಸಿನ ಕೆಳಗಿರುವವರನ್ನು ಚೆಕ್ಕಿಂಗ್ ಕೌಂಟರ್ ಬಳಿ ಅವರೆಲ್ಲರನ್ನು ತಡೆಯಲಾಗಿತ್ತು. ಆದರೆ, ನಂತರ ಅವರಿಗೆ ಚಿತ್ರವನ್ನು ವೀಕ್ಷಿಸಲು ಅವಕಾಶವನ್ನು ನೀಡಲಾಯಿತ್ತು ಎಂದು ಸಂಸ್ಥೆಯೂ ಸಮಜಾಯಿಷಿ ನೀಡಿದೆ.
ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಸಂಸ್ಥೆಯ ನಡೆಗೆ ಅನೇಕರು ಆಕ್ಷೇಪಿಸಿದ್ದು ಅನುಮತಿ ಇಲ್ಲದೆ ವಿಡಿಯೋವನ್ನು ತೆಗೆದು ಪ್ರಕಟಿಸಿದ್ದು ತಪ್ಪು. ಇದು ಅಮಾಯಕರನ್ನು ಗೇಲಿ ಮಾಡುವಂತಿದೆ ಸರ್ಕಾರ ರೋಹಿಣಿ ಸಂಸ್ಥೆಯ ವಿರುದ್ದ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.