ಕೋಲ್ಕತ್ತ: ಖಾಸಗಿ ನರ್ಸಿಂಗ್ ಹೋಮ್ವೊಂದು ದುಬಾರಿ ಬಿಲ್ ವಸೂಲಿ ಮಾಡಲು ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯನ್ನು ಎರಡು ದಿನಗಳವರೆಗೆ ವೆಂಟಿಲೇಟರ್ನಲ್ಲಿಯೇ ಇಟ್ಟಿತ್ತು ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ಆದರೆ, ನರ್ಸಿಂಗ್ ಹೋಮ್ ಮಾಲೀಕರು ಇದೆಲ್ಲ ಸುಳ್ಳು ಎಂದು ಆರೋಪ ನಿರಾಕರಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ನಿವಾಸಿ 55 ವರ್ಷದ ಶೇಖ್ ಶಬ್ಬೀರ್ ಅಲಿ ಎಂಬುವರನ್ನು ಪಾರ್ಕ್ ಸರ್ಕಸ್ ಎರಿಯಾದಲ್ಲಿದ್ದ ಸ್ವಸ್ತಿಕ್ ನರ್ಸಿಂಗ್ ಹೋಮ್ಗೆ ಆಗಸ್ಟ್ 25ರಂದು ದಾಖಲಿಸಲಾಗಿತ್ತು. ಆಗಸ್ಟ್ 31ರಂದು ರೋಗಿಯ ಚಿಕಿತ್ಸೆಯ ಬಿಲ್ 47,000 ರೂ. ಪಾವತಿಸುತ್ತಿದ್ದಂತೆ ಆಸ್ಪತ್ರೆಯವರು ಆತ ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ. ಹಲವು ಬಾರಿ ಕೇಳಿಕೊಂಡರೂ ಆಗಸ್ಟ್ 30ರವರೆಗೂ ರೋಗಿಯನ್ನು ನೋಡಲು ಬಿಟ್ಟಿರಲಿಲ್ಲ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ಆಸ್ಪತ್ರೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ; ಒಂದೇ ಢಾಬಾದ 65 ಸಿಬ್ಬಂದಿಗೆ ಕರೊನಾ ಸೋಂಕು….! ಸೂಪರ್ಸ್ಪ್ರೆಡರ್ ಆಗುವ ಆತಂಕ
ಆದರೆ, ಈ ಆರೋಪಗಳನ್ನು ಆಸ್ಪತ್ರೆ ಮಾಲೀಕ ವಿಕ್ರಂ ಖೈತಾನ್ ನಿರಾಕರಿಸಿದ್ದಾರೆ. ರೋಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಅದು ಪಾಸಿಟಿವ್ ಎಂದು ಗೊತ್ತಾಗುತ್ತಿದ್ದಂತೆ ಐಸೋಲೇಷನ್ನಲ್ಲಿ ಇರಿಸಲಾಗಿತ್ತು. ಈ ವೇಳೆ ಭೇಟಿ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ. ದೂರದಿಂದ ನೋಡಬಹುದು ಅಥವಾ ವಿಡಿಯೋ ಕಾಲ್ನಲ್ಲಿ ಮಾತನಾಡಿಸಬಹುದು. ಆದರೆ, ರೋಗಿಯ ಸ್ಥಿತಿ ಬಿಗಡಾಯಿಸಿದ್ದರಿಂದ ರೋಗಿಯನ್ನು ನೋಡುವಂತೆ ಆಗಸ್ಟ್ 30ರಂದು ಕುಟುಂಬದವರಿಗೆ ತಿಳಿಸಿದ್ದೆವು ಎಂದು ವಿಕ್ರಮ್ ಹೇಳಿದ್ದಾರೆ.
ಕೋವಿಡ್ ಮಾರ್ಗಸೂಚಿಯಂತೆ ಮೃತನ ಅಂತ್ಯಕ್ರಿಯೆಗೆ ಅವಕಾಶ ನೀಡುವ ಫಾರ್ಮ್ಗೆ ಕುಟುಂಬದವರು ಸಹಿ ಹಾಕದ ಕಾರಣ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು?