ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ-ಹೇರೂರು ರಸ್ತೆಯ ಶ್ರೀವನ-ಬಿದ್ರಕಾನ ಸಮೀಪ ವಿದ್ಯುತ್ ತಂತಿಯ ಮೇಲೆ ಹಾಗೂ ರಸ್ತೆಗೆ ಅಡ್ಡವಾಗಿ ಗುರುವಾರ ಮುಂಜಾನೆ ಮರವೊಂದು ಬಿದ್ದು ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು.
ಇದರಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಾಯಿತು.
ಬೆಳಗ್ಗೆ ಸಿದ್ದಾಪುರಕ್ಕೆ ಹೋಗುವ ಹಾಗೂ ಸಿದ್ದಾಪುರದಿಂದ ಕವಲಕೊಪ್ಪ ಮಾರ್ಗವಾಗಿ ಹೋಗುವ ಸಾರಿಗೆ ಬಸ್ಸು ಹದಿನಾರನೇ ಮೈಲಕಲ್ ಮಾರ್ಗವಾಗಿ ತೆರಳಿದ್ದರಿಂದ ಕೆಲವು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಇಲ್ಲದೇ ಚಡಪಡಿಸಿದರು.
ಕೆಲವು ವಿದ್ಯಾರ್ಥಿಗಳಿಗೆ ಗುರುವಾರ ಪರೀಕ್ಷೆ ಇದ್ದುದರಿಂದ ಸಮಯಕ್ಕೆ ಸರಿಯಾಗಿ ಬಸ್ ನಿಲ್ದಾಣದಲ್ಲಿ ಬಂದು ಕುಳಿತಿದ್ದ ದೃಶ್ಯ ಕಂಡುಬಂತು.
ಸಿದ್ದಾಪುರದಿಂದ ಕವಲಕೊಪ್ಪ ಮಾರ್ಗವಾಗಿ ಬರುವ ಪತ್ರಿಕಾ ವಾಹನವೂ ನಿಡಗೋಡ, ಹದಿನಾರನೇ ಮೈಲಕಲ್, ವಾಜಗದ್ದೆ ಮಾರ್ಗವಾಗಿ ಹಾರ್ಸಿಕಟ್ಟಾ ಮೂಲಕ ಹೋಗುವಂತಾಯಿತು.
ಮರತೆರವು: ಹೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯರು ವಿದ್ಯುತ್ ತಂತಿಯ ಮೇಲೆ ಹಾಗೂ ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು ತೆರವುಗೊಳಿಸಿ ನಂತರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.