ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವಿಮಾನ ಟೇಕ್ಆಫ್ಗೆ ಸಿದ್ಧವಾಗಿದ್ದ ಸಮಯದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಕೋಲಾಹಲ ಉಂಟಾಯಿತು. ಎಲ್ಲ ಪ್ರಯಾಣಿಕರು ಪ್ರಾಣ ಭಯದಿಂದ ಹೊರಗೆ ಓಡಿ ಬಂದರು. ಕೊನೆಗೆ ತಪಾಸಣೆ ಬಳಿಕ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ. ವಿವರಕ್ಕೆ ಹೋದರೆ..
ಇದನ್ನೂ ಓದಿ: ಗರ್ಭದಲ್ಲಿರುವ ಮಗುವಿಗೆ ಬದುಕುವ ಮೂಲಭೂತ ಹಕ್ಕಿದೆ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಬುಧವಾರ ಬೆಳಗ್ಗೆ 7.30ಗಂಟೆಗೆ ದೆಹಲಿಯಿಂದ ವಡೋದರಾಕ್ಕೆ ಏರ್ ಇಂಡಿಯಾ ವಿಮಾನವೊಂದು ಹೊರಡಲು ಸಿದ್ಧವಾಗಿತ್ತು. ಎಲ್ಲ ಪ್ರಯಾಣಿಕರು ಹತ್ತಿದ ನಂತರ ಟೇಕ್-ಆಫ್ಗೆ ತಯಾರಾಗುತ್ತಿರುವಾಗ, ಒಬ್ಬ ಗಗನಸಖಿ ಬಾತ್ರೂಮ್ಗೆ ಹೋಗಿದ್ದಾರೆ. ಒಳಗೆ ಆಕೆಗೆ ಒಂದು ಚೀಟಿ ಸಿಕ್ಕಿದೆ. ಅದನ್ನು ತೆರೆದು ನೋಡಿದಾಗ ಬಾಂಬ್ ಎಂದು ಬರೆದಿತ್ತು. ತಕ್ಷಣ ಹೊರಗೆ ಬಂದು ಕ್ಯಾಪ್ಟನ್ ಗೆ ಈ ವಿಷಯ ತಿಳಿಸಿದ್ದಾಳೆ. ಇದೇ ವೇಳೆ ಈ ವಿಷಯ ತಿಳಿದ ಪ್ರಯಾಣಿಕರೂ ಗಾಬರಿಗೊಂಡಿದ್ದಾರೆ. ನಂತರ ಎಚ್ಚೆತ್ತ ಕ್ಯಾಪ್ಟನ್ ಪ್ರಯಾಣಿಕರನ್ನು ಕೆಳಗಿಳಿಸಿ ಈ ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಪಡೆ ವಿಮಾನದ ಒಳಹೋಗಿ ಪರಿಶೀಲಿಸಿದ್ದಾರೆ. ಅನುಮಾನಾಸ್ಪದವಾಗಿ ಏನೂ ಕಾಣದ ನಂತರ ಅದು ಹುಸಿ ಬೆದರಿಕೆ ಎಂದು ತೀರ್ಮಾನಿಸಲಾಯಿತು. ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಕಳುಹಿಸಲಾಯಿತು.
ಪ್ರಸ್ತುತ, ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗಿದೆ. ಆ ಚೀಟಿ ಬಾತ್ ರೂಮ್ ಗೆ ಹೇಗೆ ಬಂತು? ಅಲ್ಲಿ ಇಟ್ಟವರು ಯಾರು? ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಇದನ್ನು ಮಾಡಿರಬಹುದೇ? ಇಲ್ಲದಿದ್ದರೆ ಬೇರೆಯವರ ಕೈವಾಡವಿದೆಯೇ? ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.