ಸಾಗರ: ಮಕ್ಕಳಲ್ಲಿ ಶಿಕ್ಷಣದ ಜತೆ ವ್ಯಾವಹಾರಿಕ ಜ್ಞಾನ ಬೆಳೆಯಬೇಕು. ನಾಲ್ಕು ಗೋಡೆ ನಡುವಿನ ಶಿಕ್ಷಣ ಮಾನಸಿಕವಾಗಿ ಮಕ್ಕಳನ್ನು ಸಜ್ಜುಗೊಳಿಸಿದರೆ ಹೊರಗಿನ ಶಿಕ್ಷಣ ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಸಜ್ಜುಗೊಳಿಸುತ್ತದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರತ್ನಕುಮಾರ್ ಅವಧಾನಿ ಹೇಳಿದರು.
ಕೆಳದಿಯಲ್ಲಿ ಬುಧವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಬಾಹ್ಯ ಶಿಕ್ಷಣ ನೀಡಬೇಕು ಎನ್ನುವುದು ಸರ್ಕಾರದ ಉದ್ದೇಶ. ಈ ಹಿನ್ನೆಲೆಯಲ್ಲಿ ಬೇರೆಬೇರೆ ರೀತಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು ಅದರ ಒಂದು ಭಾಗವೇ ಮಕ್ಕಳ ಸಂತೆಯಾಗಿದೆ ಎಂದು ಹೇಳಿದರು.
ಕೆಳದಿಯ ಶಾಲೆಗೆ ದಶಕಗಳ ಇತಿಹಾಸ ಹೊಂದಿದೆ. ಮಕ್ಕಳ ಸಂತೆ ನಡೆಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದಾಗ ಗ್ರಾಮ ಪಂಚಾಯಿತಿ, ಶಾಲಾಭಿವೃದ್ಧಿ ಸಮಿತಿ, ಪಾಲಕರು ಉತ್ತಮ ಸಹಕಾರ ನೀಡಿದರು. ಒಟ್ಟು ೯೮ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಒಟ್ಟು ೪೫ ಅಂಗಡಿಗಳನ್ನು ಮಕ್ಕಳು ಹಾಕಿದ್ದಾರೆ. ಮಕ್ಕಳು ಮಾರಾಟ ಮಾಡುತ್ತಿರುವ ತರಕಾರಿ ಇನ್ನಿತರೆಗಳು ಶೇ.೮೦ ಅವರ ಜಮೀನಿನಲ್ಲೇ ಬೆಳೆದದ್ದು ವಿಶೇಷವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಶಶಿಕುಮಾರ್, ಸದಸ್ಯ ಎಂ.ಸAದೀಪ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಕೆ.ರಮೇಶ್, ಪ್ರಮುಖರಾದ ಕೆ.ಎಂ.ಸತ್ಯನಾರಾಯಣ, ಎಂ.ಕೆ.ನಾರಾಯಣಪ್ಪ, ಶಿಕ್ಷಕರಾದ ರಿಹಾನಾಬಾನು, ಚಂದ್ರಕಲಾ, ಕವಿರಾಜ್, ಶ್ರುತಿ, ಲೋಲಕುಮಾರ್ ಇತರರಿದ್ದರು.