ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಒಟ್ಟು 9,81,784 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದವಾಗಿದೆ. ಈ ಪೈಕಿ ಶೇ.90ಕ್ಕೂ ಹೆಚ್ಚು ಯೋಜನೆಗಳು ಬೆಂಗಳೂರಿನ ಆಚೆ ಅನುಷ್ಠಾನಗೊಳ್ಳುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಶನಿವಾರ ನೀಡಿದ ಸಚಿವರು, ಮೂರು ದಿನಗಳ ಸಮಾವೇಶದಲ್ಲಿ ಲಕ್ಷ ಕೋಟಿ ರೂ. ಮೊತ್ತದ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 5.41 ಲಕ್ಷ ಕೋಟಿ ರೂ. ಮೊತ್ತದ 57 ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 1.57 ಲಕ್ಷ ಕೋಟಿ ರೂ. ಮೊತ್ತದ 2 ಯೋಜನೆಗಳನ್ನು ಸಮಾವೇಶದಲ್ಲಿ ಘೋಷಿಸಲಾಗಿದೆ ಎಂದರು.
2 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದ ಪ್ರಸ್ತಾವನೆಗಳೊಂದಿಗೆ ವಿವಿಧ ಉದ್ಯಮಿಗಳು ಬಂದಿದ್ದರು. ಆದರೆ, ಈ ಯೋಜನೆಗಳಿಗೆ ಭೂಮಿ, ವಿದ್ಯುತ್, ಕಚ್ಚಾ ವಸ್ತುಗಳು, ಸಬ್ಸಿಡಿ ಸೇರಿದಂತೆ ವಿವಿಧ ವಿಷಯಗಳು ಇತ್ಯರ್ಥ ಆಗಬೇಕಾಗಿರುವುದರಿಂದ ಒಪ್ಪಂದ ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಉದ್ಯಮಿಗಳೊಂದಿಗೆ ಅಧಿಕಾರಿಗಳು ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
90 ದಿನಗಳೊಳಗೆ ಅನುಮೋದನೆ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಡಂಬಡಿಕೆಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಹೂಡಿಕೆದಾರರ ಸಮಾವೇಶದಲ್ಲಿ ಆಗಿರುವ ಒಪ್ಪಂದಗಳನ್ನು 90 ದಿನದೊಳಗೆ ಅನುಮೋದನೆ ನೀಡಲಾಗುವುದು. ಒಡಂಬಡಿಕೆಗಳ ಅನುಷ್ಠಾನಕ್ಕಾಗಿ ಜಿಲ್ಲಾವಾರು ಸಮನ್ವಯ ಸಮಿತಿ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಮುಖ್ಯವಾಗಿ ಈ ಸಮಾವೇಶದಲ್ಲಿ ಆಗಿರುವ ಒಪ್ಪಂದಗಳ ಪೈಕಿ ಅಂದಾಜು ಶೇ.70ರಷ್ಟು ಯೋಜನೆಗಳು ಅನುಷ್ಠಾನಗೊಳ್ಳುವ ವಿಶ್ವಾಸ ಇದೆ ಎಂದರು.
ಬೆಂಗಳೂರಿನ ಆಚೆಗೆ ಕೈಗಾರಿಕೆಗಳನ್ನು ವಿಸ್ತರಿಸುವುದು ಈ ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು. ಅದರಂತೆ ಸಮಾವೇಶದಲ್ಲಿ ಆಗಿರುವ ಒಟ್ಟು ಒಪ್ಪಂದಗಳ ಪೈಕಿ ಶೇ.90ರಷ್ಟು ಬೆಂಗಳೂರಿನ ಆಚೆ ಆಗುತ್ತಿದೆ. ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 2 ಮತ್ತು 3ನೇ ಹಂತದ ನಗರಗಳಲ್ಲೂ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಪ್ರಶಂಸಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.