ಮಾನ್ವಿ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ತಕ್ಷಣ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಎಲ್ಕೆಜಿಯಿಂದ ಪಿಯುಸಿ ದ್ವಿತೀಯ ವರ್ಷದವರೆಗೆ ಉಚಿತ ಶಿಕ್ಷಣ ಭರವಸೆ
ಪಟ್ಟಣದ ಟಿಎಪಿಸಿಎಂಎಸ್ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಕೆಜಿಯಿಂದ ಪಿಯುಸಿ ದ್ವಿತೀಯ ವರ್ಷದವರೆಗೆ ಉಚಿತ ಶಿಕ್ಷಣ, ಹೈಟೆಕ್ ಆಸ್ಪತ್ರೆ, ಗುಡಿ ಕೈಗಾರಿಕೆಗೆ ಆದ್ಯತೆ, 5 ಲಕ್ಷ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ, ವೃದ್ಧರು, ವಿಧವೆಯರಿಗೆ ಮಾಸಿಕ 5 ಸಾವಿರ ರೂ. ಹಾಗೂ ಯುವಕ-ಯುವತಿಯರಿಗೆ 2,500 ರೂ. ಪ್ರೋತ್ಸಾಹ ಧನ ಸೇರಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 15 ಸಾವಿರ ರೂ. ವೇತನ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಈ ಭಾಗದ ರೈತರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದು, ರೈತರು ಪ್ರತಿವರ್ಷ ಎರಡು ಬೆಳೆ ಬೆಳೆಯಲು ಕಾಲುವೆಗೆ ನೀರು ಸರಬರಾಜು ಮಾಡಲಾಗುವುದು. 84 ಕೋಟಿ ರೂ. ವೆಚ್ಚದಲ್ಲಿ ಯಡಿವಾಳ ಏತ ನೀರಾವರಿ ಯೋಜನೆ, ಮಿನಿವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ, ಸಣ್ಣ ಜಾತಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕರನ್ನ ಗೆಲ್ಲಿಸಿದರೆ ಮಂತ್ರಿ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಜೆಡಿಎಸ್ ರೈತರು, ಬಡವರ, ಹಿಂದುಳಿದವರ, ಅಲ್ಪಸಂಖ್ಯಾತ ವರ್ಗಗಳ ಅಭಿವೃದ್ಧಿ ಪರ ಪಕ್ಷವಾಗಿದೆ. ವಲಸೆ ಬಂದಿರುವ ಹಾಗೂ ಅಧಿಕಾರ ನಡೆಸಲು ಬಾರದವರಿಗೆ ಮತ ನೀಡಬಾರದು ಎಂದರು.
ಜೆಡಿಎಸ್ ಅಭ್ಯರ್ಥಿ, ಶಾಸಕ ರಾಜಾ ವೆಂಕಟಪ್ಪನಾಯಕ, ಪುರಸಭೆ ವಿಪಕ್ಷನಾಯಕ ರಾಜಾ ಮಹೇಂದ್ರನಾಯಕ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಮುಖಂಡರಾದ ಸೈಯದ್ ಹುಸೇನ್ ಸಾಹೇಬ್, ನಾಗರಾಜ ಭೋಗಾವತಿ, ಖಲೀಲ್ ಖುರೇಶಿ, ಪಿ.ರವಿಕುಮಾರ, ವೆಂಕಟನರಸಿಂಹಗೌಡ ಇದ್ದರು.