ವಿಜಯಪುರ: ಇಂಡಿ ಪಟ್ಟಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿರುವ ಶಾಸಕ ಯಶವಂತರಾಯಗೌಡ ಪಾಟೀಲ ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ತಾಲೂಕು ಕೇಂದ್ರ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಂಡಿ ಪಟ್ಟಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಇಲ್ಲ. ಹೀಗಾಗಿ ಯಾವಾಗ ಮಂಜೂರು ಮಾಡಲಾಗುವುದೆಂದು ಅವರು ಮಂಗಳವಾರ ಪ್ರಶ್ನಿಸಿದರು.
ಶಿರಸಿ ಹಾಗೂ ಸಿಂಧನೂರ ಮತ್ತಿತರ ಭಾಗಗಳಲ್ಲಿ ಜಿಲ್ಲಾ ಕೇಂದ್ರ ಬಿಟ್ಟು ವಾಣಿಜ್ಯ ತೆರಿಗೆ ಇಲಾಖೆ ಸ್ಥಾಪಿಸಲಾಗಿದೆ. ಹೀಗಾಗಿ ಗಡಿಭಾಗದ ಇಂಡಿ ತಾಲೂಕಿನಲ್ಲಿಯೂ ವಾಣಿಜ್ಯ ತೆರಿಗೆ ಇಲಾಖೆ ಸ್ಥಾಪಿಸಬೇಕೆಂದರು. ಅಲ್ಲದೇ ಈ ನಿಟ್ಟಿನಲ್ಲಿ ವಿಶೇಷ ಸಭೆ ನಡೆಸಲು ಕೋರಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಇಂಡಿ ಪಟ್ಟಣ ಮತ್ತು ತಾಲೂಕಿಗೆ ಸಂಬಂಧಿಸಿದಂತೆ ಒಟ್ಟು 1725 ನೋಂದಾಯಿತ ವರ್ತಕರಿದ್ದು, ಇವರೆಲ್ಲರೂ ವಿಜಯಪುರದ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿ-440 ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಈ ವರ್ತಕರಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ಕರ್ತವ್ಯ ಹಾಗೂ ವ್ಯಾಪಾರಸ್ಥಳಗಳ ತಪಾಸಣೆಗಳನ್ನು ವಿಜಯಪುರದಲ್ಲಿರುವ ಇಲಾಖೆ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ಪ್ರಸ್ತುತ ಸುಮಾರು 4900 ನೋಂದಾಯಿತ ವರ್ತಕರು ಅಸ್ತಿತ್ವದಲ್ಲಿರುವ ಹಿನ್ನೆಲೆಯಲ್ಲಿ ಇಂಡಿ ತಾಲೂಕಿನ 1725 ನೋಂದಾಯಿತ ವರ್ತಕರನ್ನು ವಿಜಯಪುರ ಕಚೇರಿಯಿಂದ ಬೇರ್ಪಡಿಸುವುದು ಆಡಳಿತ ದೃಷ್ಠಿಯಿಂದ ಸಮಂಜಸವಲ್ಲ ಎಂದರು.
ಆಗ ಯಶವವಂತರಾಯಗೌಡರು ಮುಂದಿನ ದಿನಗಳಲ್ಲಿ ಅವಕಾಶವಿದ್ದರೆ ಇಂಡಿಯಲ್ಲೂ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲಿಸಲು ವಿನಂತಿಸಲಾಗಿ ಸಿಎಂ ಸಿದ್ದರಾಮಯ್ಯ ಸಮ್ಮತಿಸಿದರು.