ಸಿಂಧನೂರು: ವೈದ್ಯರು ಒತ್ತಡದ ಜೀವನದ ನಡುವೆ ಮನರಂಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಮನೋಲ್ಲಾಸ ಹೆಚ್ಚಿಸುವ ದಿವ್ಯ ಔಷಧವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ.ಕೆ.ಶಿವರಾಜ ಹೇಳಿದರು.
ಇದನ್ನೂ ಓದಿ: ಸುಮಧುರ ಗೀತೆಗಳ ರಸಮಂಜರಿ
ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದ ಐಎಂಎ ಭವನದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಒತ್ತಡ ಜೀವನದಲ್ಲಿ ಮನರಂಜನೆ ನೀಡುವ ಕಾರ್ಯಕ್ರಮ ಅಗತ್ಯವಾಗಿದ್ದು , ಇದಕ್ಕಾಗಿ ವೈದ್ಯರು ಬಿಡುವು ಮಾಡಿಕೊಳ್ಳಬೇಕು. ಹೆಚ್ಚಿನ ಒತ್ತಡ ಅಪಾಯ ತಂದೊಡ್ಡುತ್ತದೆ. ಮನರಂಜನೆಯಿಂದ ಮೆದುಳಿನ ಕಾರ್ಯಕ್ಷಮತೆಯೂ ಹೆಚ್ಚಲಿದೆ ಎಂದರು.
ಸಂಘದ ನಿಯೋಜಿತ ತಾಲೂಕು ಅಧ್ಯಕ್ಷ ವಿ.ಬಿ.ಚಿನಿವಾಲರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯರು ಕೆಲಸದಿಂದ ಬಿಡುವು ಪಡೆದು ಮನರಂಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯದ ಕಡೆಗೂ ಗಮನ ಹರಿಸಿದ್ದಾರೆ.
ಕುಟುಂಬದ ಜತೆಗೆ ಭಾಗವಹಿಸುವಿಕೆ ಹೆಚ್ಚಿನ ಮಹತ್ವ ನೀಡುತ್ತದೆ ಎಂದರು. ಡಾ.ಬಸನಗೌಡ, ಡಾ.ಚಂದ್ರಶೇಖರ ಮೈಲಾಪುರ, ಡಾ.ಅನಿಲಕುಮಾರ, ಡಾ.ನಾಗರಾಜ ಕಾಟ್ವಾ, ಡಾ.ಪದ್ಮಾ ಬಿ.ಪಾಟೀಲ್, ಡಾ.ಅಭಿನೇತ್ರಿ ಪಾಟೀಲ್ ಇತರರಿದ್ದರು.