ಬೆಂಗಳೂರು: ಕರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದ್ದರೂ ಆಸ್ಪತ್ರೆಗೆ ಹೋಗಿ ಕ್ವಾರಂಟೈನ್ ಆಗಲು ಸತಾಯಿಸಿದ ಜೆಡಿಎಸ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಬಗ್ಗೆ ಎಲ್ಲೆಡೆ ಟೀಕೆಗಳು ಕೇಳಿಬಂದಿವೆ.
ಇದನ್ನೂ ಓದಿ: ಸಿಎಂ ಬಿಎಸ್ವೈ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ನೇಮಕ
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಸಚಿವ ವಿ. ಸೋಮಣ್ಣ, ‘‘ಕಾರ್ಪೊರೇಟರ್ ಆದ್ರೇನು, ಯಾರಾದ್ರೇನು, ಎಲ್ಲರೂ ಕಾನೂನಿಗೆ ಬೆಲೆ ಕೊಡಲೇಬೇಕು. ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂಟೈನ್ ಆಗಿದ್ದರು, ಇನ್ನು ಕಾರ್ಪೊರೇಟರ್ ಯಾವ ಲೆಕ್ಕ?’’ ಎಂದು ಪ್ರಶ್ನಿಸಿದರು.
‘‘ಕೋತಿ ತಾನು ಕೆಡ್ತು ಅಂತ ಹೊಲವೆಲ್ಲ ಕೆಡಿಸೋಕೆ ಹೋಗಬಾರದು. ಇಮ್ರಾನ್ ಪಾಷಾಗೆ ಇನ್ನೂ ಸಣ್ಣ ವಯಸ್ಸು. ಕಾನೂನಿಗೆ ಆತ ಬೆಲೆ ಕೊಡಲಿ’’ ಎಂದು ಹೇಳಿದರು.
ಇದನ್ನೂ ಓದಿ: ಪಾಕ್ ಬೇಹುಗಾರಿಕೆ ಜಾಲ ಭೇದಿಸಿದ ಮಿಲಿಟರಿ ಇಂಟೆಲಿಜೆನ್ಸ್
ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿ, ‘‘ಇಮ್ರಾನ್ ಪಾಷಾ ಮೊದಲಿನಿಂದಲೂ ತರಲೆ ಮಾಡ್ತಿದ್ದಾನೆ. ಪಾಸಿಟಿವ್ ಕೇಸ್ ಬಂದ ಪ್ರದೇಶದಲ್ಲಿ ಮೊದಲಿನಿಂದಲೂ ಓಡಾಡ್ತಿದ್ದಾನೆ. ಆರೋಗ್ಯ ಇಲಾಖೆ ಅಧಿಕಾರಿಗಳು ಯಾರಿಗೆಲ್ಲ ಕ್ವಾರೆಂಟೈನ್ ಇರಬೇಕು ಅಂತಾರೋ ಅವರೆಲ್ಲ ಪಾಲಿಸಲೇಬೇಕು. ಪಾಸಿಟಿವ್ ಬಂದವರು ಆಸ್ಪತ್ರೆ ಸೇರಬೇಕು. ತರಲೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಜರುಗಿಸುತ್ತಾರೆ’’ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯಿಸಿ, ‘‘ನಾನು ಪಾದರಾಯನಪುರಕ್ಕೆ ಭೇಟಿ ಕೊಟ್ಟಾಗ ಇಮ್ರಾನ್ ಪಾಷಾ ಜತೆಗಿದ್ದಿದ್ದು ನಿಜ. ಆದರೆ ಅದಾಗಿ 22 ದಿನಗಳಾದವು. ನಾನು ನಿಮ್ಮ ಮುಂದೆ ಗುಂಡುಕಲ್ಲಿನಂತೆ ನಿಂತಿದ್ದೇನೆ. ಪ್ರತಿ ವಾರ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದೇನೆ. ಪಾಷಾಗೆ ಬಂತು ಅಂತ ನಾನೂ ಕ್ವಾರಂಟೈನ್ ಆಗಬೇಕಾಗಿಲ್ಲ’’ ಎಂದು ಹೇಳಿದರು.
ಕರೊನಾ ಸೋಂಕು ಕಡಿಮೆಯಾದರೆ ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಗೆ ತೊಡಕು!