ಚಾಮರಾಜನಗರ: ಅದು ಕಾಡಂಚಿನ ಕುಗ್ರಾಮ. ಮಧ್ಯರಾತ್ರಿಯಲ್ಲಿ ಗರ್ಭಿಣಿಯೊಬ್ಬಳಿಗೆ ಪ್ರಸವ ವೇದನೆ ಶುರುವಾಯ್ತು. ಸಿಗದಿರುವ ನೆಟ್ ವರ್ಕ್ ಹುಡುಕಿ ಮನೆಯವರು ಆ್ಯಂಬುಲೆನ್ಸ್ಗೆ ಕರೆ ಮಾಡಿದರು. ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ತುರ್ತಾಗಿ ಬಂದ ಆ್ಯಂಬುಲೆನ್ಸ್ಗೆ ರಸ್ತೆ ಮಧ್ಯೆ ಅಡ್ಡಲಾಗಿ ಗಜರಾಜ ನಿಂತಿದ್ದ. ಅತ್ತ ಗರ್ಭಿಣಿಗೆ ಹೆರಿಗೆ ಬೇನೆ, ಇತ್ತ ಆ್ಯಂಬುಲೆನ್ಸ್ಗೆ ಅಡ್ಡ ಆನೆ. ಆಮೇಲಿನದ್ದು ಒಂಥರಾ ‘ಆಪರೇಷನ್ ಗಜ-ಪ್ರಸವ’.
ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸುರೇಶ್ ಎಂಬವರ ಪತ್ನಿ ಕನಕ (23) ಎಂಬಾಕೆಗೆ ಸೋಮವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಬಂದ ಆಂಬುಲೆನ್ಸ್ಗೆ ರಸ್ತೆ ಮಧ್ಯೆ ಕಾಡಾನೆ ಎದುರಾಯಿತು. ಕಿರಿದಾದ ದಾರಿಯಲ್ಲಿ ಮುಂದೆ ಸಾಗಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಗರ್ಭಿಣಿ ಕಡೆಯವರು ಬಂದು ಕಾಡಾನೆ ಕಡೆಗೆ ಬ್ಯಾಟರಿ ಬೆಳಕು ಬಿಟ್ಟಿದ್ದಾರೆ. ಆನೆ ವಿಚಲಿತಗೊಂಡು ಆಂಬುಲೆನ್ಸ್ ಇದ್ದ ಕಡೆಗೇ ಹೆಜ್ಜೆ ಇಡಲಾರಂಭಿಸಿದೆ. ಭೀತಿಗೊಂಡ ಚಾಲಕ ಆಂಬುಲೆನ್ಸ್ ಹಿಂದಕ್ಕೆ ತೆಗೆದುಕೊಂಡಿದ್ದಾನೆ. ಅದೃಷ್ಟವಶಾತ್ ಕಾಡಾನೆ ತನ್ನ ನಡೆಯ ದಿಕ್ಕು ಬದಲಿಸಿದೆ.
ಈ ಆತಂಕಕಾರಿ ದೃಶ್ಯಾವಳಿಯನ್ನು ಆಂಬುಲೆನ್ಸ್ನಲ್ಲಿ ಚಾಲಕನ ಜೊತೆಗಿದ್ದಾತ ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿದ್ದಾನೆ. ಪ್ರಾಣಾಪಾಯ ಎದುರಾದ ಸಂದರ್ಭದಲ್ಲಿ ಇಬ್ಬರು ನಡೆಸಿರುವ ಸಂಭಾಷಣೆ ದೃಶ್ಯವಾಳಿಯಲ್ಲಿದೆ. ಕಾಡಾನೆ ದಾರಿ ಬಿಟ್ಟ ನಂತರ ಗರ್ಭಿಣಿ ಕನಕಳನ್ನು ಕೌದಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಣ್ಣು ಮಗು ಜನನವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಗೂಗಲ್-ಪೇ ವಹಿವಾಟಿನಿಂದಾಗಿ ಸಿಕ್ಕಿಬಿದ್ದ ಕೊಲೆಗಾರ!; ಸ್ನೇಹಿತನ ಪತ್ನಿಯನ್ನು ಗೆಸ್ಟ್ಹೌಸ್ಗೆ ಕರೆತಂದು ಸಾಯಿಸಿದ್ದ..