ಕುಷ್ಟಗಿ: ನಾನು ಇತಿಹಾಸ ನಿರ್ಮಿಸುವ ವ್ಯಕ್ತಿಯಾಗಿದ್ದೇನೆ. ಮುಂದಿನ ವಿಧಾಸಭೆ ಚುನಾವಣೆಯಲ್ಲಿಯೂ ಕುಷ್ಟಗಿ ಕ್ಷೇತ್ರದಿಂದ ಮರು ಆಯ್ಕೆಯಾಗಿ ಇಲ್ಲಿಯೂ ಇತಿಹಾಸ ನಿರ್ಮಾಣ ಮಾಡುತ್ತೇನೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶನಿವಾರ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಷ್ಟಗಿ ಕ್ಷೇತ್ರದಲ್ಲಿ ಶಾಸಕರಾಗಿ ಅವಧಿ ಪೂರೈಸಿ ಮರು ಅವಧಿಗೆ ಈವರೆಗೆ ಯಾರೂ ಆಯ್ಕೆಯಾಗಿಲ್ಲ. ಲಿಂಗಸುಗೂರು ಕ್ಷೇತ್ರದಲ್ಲಿ ಮೂರು ಬಾರಿ ಯಾರೂ ಶಾಸಕರಾಗಿಲ್ಲ. ಆ ದಾಖಲೆ ಮುರಿದಿದ್ದೇನೆ. ಇಲ್ಲಿಯೂ ಮರು ಅವಧಿಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸುತ್ತೇನೆ. ಕಳೆದ ಚುನಾವಣೆಯಲ್ಲಿ 18 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ ಈ ಬಾರಿ ಅದಕ್ಕಿಂತ ಒಂದು ಮತವಾದರೂ ಹೆಚ್ಚು ಪಡೆದು ಮೂರನೇ ಬಾರಿ ಶಾಸಕನಾಗುತ್ತೇನೆ. ರಾಜ್ಯಮಟ್ಟದ ನಾಯಕರು ಅದರಲ್ಲಿಯೂ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಪುನರುಚ್ಚಿಸಿದರು.