ಹಾಸನ: ಅಳಿವಿನಂಚಿಗೆ ತಲುಪಿರುವ ಈಜಿಪ್ಟಿಯನ್ ರಣಹದ್ದು ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಕಾಣಿಸಿಕೊಂಡಿದೆ. ಉದ್ದ ಕಾಲು, ಕೊರಳಿನ ಬಳಿ ಬಿಳಿಯ ಬಣ್ಣ ಹಾಗೂ ಸಿಂಹದಂತೆ ದಟ್ಟ ಕೂದಲು ಹೊಂದಿದ್ದು ಸಾಕಷ್ಟು ವೈಶಿಷ್ಟ್ಯೆಯಿಂದ ಕೂಡಿರುವ ಈ ರಣಹದ್ದುಗಳನ್ನು ಶಿವಮೊಗ್ಗದ ವನ್ಯಜೀವಿ ತಜ್ಞ ಕೇಶವಮೂರ್ತಿ ಗುರುತಿಸಿದ್ದಾರೆ. ಬಾಣಾವರ ಬಸ್ ನಿಲ್ದಾಣ ರಸ್ತೆಯಲ್ಲಿ ನಾಯಿಯ ಶವ ತಿನ್ನುತ್ತ ಹದ್ದು ನಿಂತಿದ್ದಾಗ ಕ್ಯಾಮರಾಗೆ ಸೆರೆ ಸಿಕ್ಕಿದೆ.
ಸಾಮಾನ್ಯವಾಗಿ ಈಜಿಪ್ಟಿಯನ್ ರಣಹದ್ದುಗಳು ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ. ಆಹಾರ ಅರಸಿ ರಣಹದ್ದು ಬಂದಿರಬಹುದು ಎನ್ನಲಾಗಿದೆ. ಮೊದಲೆಲ್ಲ ಈಜಿಪ್ಟಿಯನ್ ರಣಹದ್ದು ಎಲ್ಲ ಕಡೆಯೂ ಕಾಣಿಸಿಕೊಳ್ಳುತ್ತಿದ್ದವು. 5-6 ವರ್ಷಗಳಿಂದ ಅವುಗಳ ಸಂತತಿ ಅಳಿವಿನಂಚಿಗೆ ತಲುಪಿದೆ. ರಾಮನಗರದ ಕಲ್ಲುಬಂಡೆ, ರಾಣೆಬೆನ್ನೂರು ಭಾಗದಲ್ಲಿ ಯಥೇಚ್ಛವಾಗಿ ಕಾಣಿಸಿಕೊಳ್ಳುತ್ತವೆ ಎಂದು ಹಾಸನದ ಪರಿಸರ ಪ್ರೇಮಿ ಬಿ.ಎಸ್.ದೇಸಾಯಿ ತಿಳಿಸಿದರು.
ಇದನ್ನೂ ಓದಿ: ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್
ಹುಣಸಿನಕೆರೆ ವಾಸ್ತವ್ಯ ಸ್ಥಳ: ಹಾಸನದ ಹುಣಸಿನ ಕೆರೆಯಲ್ಲಿ ಈ ರಣಹದ್ದುಗಳು ಕಂಡುಬರುತ್ತಿದ್ದವು. ಸಂತಾನೋತ್ಪತ್ತಿ ಅವಧಿಯಲ್ಲಿ ವಿದೇಶದಿಂದ ಗುಂಪುಗಟ್ಟಲೆ ಹಾರಿ ಬರುತ್ತಿದ್ದವು. ಅವುಗಳ ವೀಕ್ಷಣೆಗೆ ಜನರು ನಿತ್ಯ ಕೆರೆ ಅಂಗಳಕ್ಕೆ ತೆರಳುತ್ತಿದ್ದರು. ಮೂರು ವರ್ಷದಿಂದ ಹುಣಸಿನಕೆರೆಯಲ್ಲಿ ಈಜಿಪ್ಟಿಯನ್ ರಣಹದ್ದುಗಳ ಕಲರವ ಇಲ್ಲವಾಗಿದೆ.