ದೇವರ ಹಿಪ್ಪರಗಿ : ಬಾಲ್ಯದಲ್ಲಿಯೇ ಮಕ್ಕಳು ಸರಿಯಾದ ಶಿಕ್ಷಣ ಪಡೆದರೆ ಉತ್ತಮ ಜೀವನ ನಡೆಸಲು ಸಾಧ್ಯ. ಮಕ್ಕಳಲ್ಲಿ ಅಡಗಿರುವ ಕ್ರಿಯಾಶೀಲತೆಯನ್ನು ಹೊರತರುವ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಮಕ್ಕಳ ಸಾಹಿತಿ ಹ.ಮಾ. ಪೂಜಾರಿ ಹೇಳಿದರು.
ಜಿಲ್ಲಾಡಳಿತ, ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಮತ್ತು ಇಂಡಿಯಾ ಲಿಟ್ರಸಿ ಪ್ರೊಜೆಕ್ಟ್ ಶಿಕ್ಷಣ ಯಾತ್ರೆ ಯೋಜನೆಯಡಿ ಕೋರವಾರ ಗ್ರಾಮದ ಕನ್ನಡ ಗಂಡು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ನಡೆದ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಸನ್ಮಾನ ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳೆಂದರೆ ದೇವರ ಸಮಾನ. ಅವರ ಸೇವೆ ಮಾಡಿದರೆ ದೇವರ ಸೇವೆಯೇ ಮಾಡಿದಂತೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲೆಗಳಲ್ಲಿ ಪಠ್ಯದ ಜತೆಗೆ ಗ್ರಂಥಾಲಯವೂ ಅಷ್ಟೇ ಅವಶ್ಯಕವಾಗಿದ್ದು, ಪ್ರತಿ ಮಗುವಿಗೂ ಶಿಕ್ಷಣ ಸಿಗುವಂತೆ ಕಾರ್ಯಗಳನ್ನು ಕೈಗೊಳ್ಳಬೇಕು. ದುಷ್ಪರಿಣಾಮ ಬೀರುವ ಅಂಶಗಳಿಂದ ಮಕ್ಕಳನ್ನು ದೂರವಿರುವಂತೆ ಶಿಕ್ಷಕರು ಮತ್ತು ಪಾಲಕರು ನೋಡಿಕೊಳ್ಳಬೇಕೆಂದರು.
ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಉಜ್ವಲ ಸಂಸ್ಥೆ ಕಾರ್ಯವು ಮಹತ್ತರವಾಗಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವವರನ್ನು ಗುರುತಿಸಿ ಸಂಸ್ಥೆ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಎಸ್.ಎ. ಕೋರವಾರ, ಯಶೋದಾ ಜೋಶಿ, ಉಜ್ಜಲ ಸಂಸ್ಥೆಯ ಐಎಲ್ಪಿ ಯೋಜನೆ ನಿರ್ದೇಶಕ ವಾಸುದೇವ ತೋಳಬಂದಿ, ಶಿಕ್ಷಣ ಇಲಾಖೆ ಬಿಆರ್ಪಿ ಶ್ರೀದೇವಿ ರೆಬಿನಾಳ ಪ್ರಾಸ್ತವಿಕವಾಗಿ ಮಾತನಾಡಿದರು.
ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮುಸ್ತಫ ಕುಡಚಿ, ರಘು ಯಾಳವಾರ, ಜ್ಯೋತಿ ಮೇತ್ರಿ, ತಸ್ನೀಮ ಆಯಿಶಾ, ಅಂಗನವಾಡಿ ಕಾರ್ಯಕರ್ತೆಯರಾದ ಶಾಂತಾಬಾಯಿ ಚಿಗರಿ, ಮಧುಮತಿ ಕಮತಗಿ, ಪ್ರೇಮಾ ಕುಳೇಕುಮಟಗಿ ಅವರಿಗೆ ಮಕ್ಕಳ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಜ್ಜಲ ಸಂಸ್ಥೆಯ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ, ಡಾ. ಶ್ವೇತಾ ಪಾಟೀಲ, ಸಾಗರ ಘಾಟಗೆ, ಭೀಮಾಬಾಯಿ ಹೇರೂರ, ಮಲ್ಲಮ್ಮ ಹೊನ್ನಳ್ಳಿ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಬಾಗಣ್ಣ ಹಾಳಕಿ ಸ್ವಾಗತಿಸಿದರು. ಶಶಿಕಾಂತ ಸುಂಗಠಾಣ ನಿರೂಪಿಸಿದರು. ಶ್ರೀಶೈಲ ಜೋಗೂರ ವಂದಿಸಿದರು.