ಮೊಳಕಾಲ್ಮೂರು : ಪರಿಪೂರ್ಣ ವಿದ್ಯೆ ಇದ್ದರೆ ನಾಗರಿಕ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಂಜುಳಾ ತಿಳಿಸಿದರು.
ತಾಲೂಕಿನ ನಾಗಸಮುದ್ರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾಗು ಸ್ಥಳೀಯ ಗ್ರಾಪಂ ಆಡಳಿತದ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಸಾಕ್ಷರತಾ ಅಭಿಯಾನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವನ ಬದುಕಿಗೆ ವಿದ್ಯೆ ಮೈಲುಗಲ್ಲಾಗಿದೆ. ನಮ್ಮ ಭಾರತವು ಸಂಪೂರ್ಣ ಸಾಕ್ಷರತೆ ಹೊಂದಬೇಕೆಂಬ ಪರಿಕಲ್ಪನೆ ಇಟ್ಟುಕೊಂಡಿದೆ. ಅದಕ್ಕೆ ಪೂರಕವಾಗಿ ಗ್ರಾಮೀಣರು ಉದಾಸೀನ ತೋರದೆ ಅಕ್ಷರ ಜ್ಞಾನಿಯಾದರೆ ತಮ್ಮ ದೈನಂದಿನ ಜೀವನ ಪಾವನ ಆಗಲಿದೆ ಎಂದರು.
ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ ಮಾತನಾಡಿ ನಾಗಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 585 ಅನಕ್ಷರಸ್ಥರನ್ನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಸಾಕ್ಷರರಾಗಲು ಹಣ ಖರ್ಚು ಮಾಡಬೇಕಿಲ್ಲ ಎಂದರು.
ನಾಗಸಮುದ್ರ ಗ್ರಾಪಂ ಅಧ್ಯಕ್ಷ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ತಾಪಂ ಅಧ್ಯಕ್ಷೆ ಸುಮಿತ್ರಮ್ಮ, ಮುಖ್ಯ ಶಿಕ್ಷಕ ಮುರುಗೇಶ್, ಸಂಪನ್ಮೂಲ ಅಧಿಕಾರಿಗಳಾದ ರಾಘವೇಂದ್ರಾಚಾರ್, ನಾಗಭೂಷಣ, ಬಸಮ್ಮ, ಮಂಜುನಾಥ, ಪಿ.ಟಿ.ರೇಖಾ, ಮಹಾಂತೇಶ ಇದ್ದರು.