More

    ಸಂಕಷ್ಟ ಕರಗಲಿ; ಜಗತ್ತು ಕರೊನಾ ಮಹಾಮಾರಿಯಿಂದ ಮುಕ್ತವಾಗಬೇಕಿದೆ…

    ವಸಂತಾಗಮನದ ಹಿನ್ನೆಲೆಯಲ್ಲಿ ಇಡೀ ಪ್ರಕೃತಿ ಸಡಗರಪಡುತ್ತಿರುವಾಗ ಇಂದು ಅಡಿಯಿಡುತ್ತಿರುವ ಪ್ಲವ ನಾಮ ಸಂವತ್ಸರ ಹೊಸ ನಿರೀಕ್ಷೆ, ಭರವಸೆ ಮೂಡಿಸಿದೆ. ಕಾಲದ ಓಟದಲ್ಲಿ ಸಾಗುವಾಗ ಸುಖ-ದುಃಖಗಳೆರಡನ್ನೂ ಸಮತೋಲಿತವಾಗಿ ಸ್ವೀಕರಿಸಿ, ಬದುಕಿನ ಹದವನ್ನು ಚೆಂದವಾಗಿಸಿಕೊಳ್ಳಬೇಕು, ಏನೇ ಬರಲಿ ಒಂದಷ್ಟು ಖುಷಿ ಇರಲಿ, ಸಂಭ್ರಮ ಇರಲಿ ಎಂದು ಸಂದೇಶ ನೀಡುವ ಯುಗಾದಿ ಹಬ್ಬ ಮನಸ್ಸುಗಳನ್ನು ಚೇತೋಹಾರಿಗೊಳಿಸುವಂಥದ್ದು. ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿಯಿಂದಲೇ ಹೊಸವರ್ಷದ ಆರಂಭ. ಹಾಗಾಗಿ, ಸ್ವಾಭಾವಿಕವಾಗಿಯೇ ಹೊಸ ಕನಸು, ಸಂಕಲ್ಪಗಳು ಒಡಮೂಡಿ ಜೀವನಪ್ರೀತಿ, ಚೈತನ್ಯವನ್ನು ಹೆಚ್ಚಿಸುತ್ತವೆ. ಹಳೆಯ ನೋವು, ದುಃಖವನ್ನು ಮರೆತು ಉಲ್ಲಸಿತವಾಗಲು, ಬದುಕೆಂಬ ಬಂಡಿಗೆ ಭರವಸೆಯ ಹೊಸ ಇಂಧನ ತುಂಬಿ ಮುಂದೆ ಸಾಗಲು ಇಂಥ ಉತ್ಸವ, ಹಬ್ಬಗಳು ಪ್ರೇರಣೆಯಾಗುತ್ತವೆ.

    ಬಾಹ್ಯ ತಾಕಲಾಟ, ಚಿಂತೆಗಳೇನೇ ಇರಲಿ ಆಂತರ್ಯದಿಂದಲೂ ನಮ್ಮನ್ನು ನಾವು ಅವಲೋಕಿಸಿಕೊಳ್ಳಲು, ತಪು್ಪಗಳನ್ನು ತಿದ್ದಿಕೊಂಡು ಒಳ್ಳೆಯದರತ್ತ ಸಾಗಲು, ಸತ್ ಸಂಕಲ್ಪಗಳ ಅನುಷ್ಠಾನಕ್ಕೆ ಮುಂದಾಗಲು ನವೀನ ಸಂವತ್ಸರ ಅನುವು ಮಾಡಿಕೊಡುತ್ತದೆ. ಹಾಗಾಗಿಯೇ, ಆತ್ಮವಿಮರ್ಶೆ, ಸಂಭ್ರಮ, ಸಂತಸಗಳ ಸಮ್ಮಿಶ್ರಣ ನಮ್ಮ ಹಬ್ಬಗಳು. ಮುಂದಿನ ಹಾದಿಯನ್ನು ವಿವೇಚನೆಯಿಂದ, ಯಾರಿಗೂ ನೋವಾಗದಂತೆ ಸಂವೇದನೆಯಿಂದ ಕ್ರಮಿಸುವ ಪಾಠವನ್ನೂ ಇದು ನೀಡುತ್ತ, ಹೊಸದನ್ನು ಸಾರ್ಥಕವಾಗಿ ಬರಮಾಡಿಕೊಳ್ಳುವಂತೆ ಮಾಡುತ್ತದೆ.

    ಇಂದಿನ ಧಾವಂತದ ಬದುಕಿನಲ್ಲಿ ಪ್ರಕೃತಿಯಿಂದ ವಿಮುಖರಾಗುತ್ತಿದ್ದೇವೆ, ಸಂಬಂಧ-ಭಾವನೆಗಳಿಂದ ದೂರವಾಗುತ್ತಿದ್ದೇವೆ, ಇವುಗಳ ನಡುವೆ ಜೀವನದ ನಿಜವಾದ ಸವಿ ಕಳೆದುಹೋಗುತ್ತಿರುವುದು ಅದೆಷ್ಟೋ ಜನರ ಗಮನಕ್ಕೆ ಬರುತ್ತಿಲ್ಲ. ಅದರಲ್ಲೂ ಕಳೆದ ಒಂದು ವರ್ಷದಿಂದ ಇಡೀ ಜಗತ್ತನ್ನು ಹೈರಾಣಾಗಿಸಿರುವ ಕರೊನಾ ಹಾವಳಿ ಮನುಕುಲಕ್ಕೆ ಅನೇಕ ಪಾಠಗಳನ್ನು ಕಲಿಸಿದೆ, ಮತ್ತೆ ನಿಸರ್ಗದ ಸಾಮೀಪ್ಯಕ್ಕೆ ಬರುವ ಅಗತ್ಯವನ್ನೂ ತಿಳಿಸಿಕೊಟ್ಟಿದೆ. ಕರೊನಾದಂಥ ಕಣ್ಣಿಗೆ ಕಾಣದ ಸೋಂಕಿನಿಂದ ಇಡೀ ಜಗತ್ತು ಸ್ತಬ್ಧವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಈ ತಲ್ಲಣವನ್ನೂ ಎದುರಿಸಿ, ಲಸಿಕೆ ಕಂಡುಹಿಡಿದು ಜನಜೀವನ ಸಾಮಾನ್ಯಸ್ಥಿತಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲೂ, ಭಾರತದ ಶಕ್ತಿ ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣಗೊಂಡಿದೆ. ಈ ಸಂವತ್ಸರದಲ್ಲಿ ಇಡೀ ಜಗತ್ತು ಕರೊನಾ ಮಹಾಮಾರಿಯಿಂದ ಮುಕ್ತವಾದರೆ, ಅದುವೇ ಸಮಾಧಾನದ ದೊಡ್ಡ ಕೊಡುಗೆ. ‘ಮಾನವ ಜನ್ಮ ದೊಡ್ಡದು ಕಣ್ರಪ್ಪಾ, ಇದನ್ನು ಹಾಳು ಮಾಡಿಕೊಳ್ಳಬೇಡಿ’ ಅಂತ ಅನುಭಾವಿಗಳು ತುಂಬ ಹಿಂದೆಯೇ ಎಚ್ಚರಿಸಿ, ಸಾಗಬೇಕಾದ ಪಥವನ್ನು ದರ್ಶಿಸಿದ್ದಾರೆ. ಯುಗಾದಿ ನಮ್ಮನ್ನು ಪ್ರಕೃತಿಯ ಸನಿಹಕ್ಕೆ ಕರೆತರುವ ಪರ್ವವೂ ಹೌದು. ಕಳೆದು ಹೋದ ನಮ್ಮ ಖುಷಿಗಳನ್ನು ಮತ್ತೆ ಪ್ರಕೃತಿಯ ಸಾಂಗತ್ಯದಲ್ಲಿ ಅರಸುತ್ತ ‘ಬೇಕು’ಗಳಿಗೆ ಕಡಿವಾಣ ಹಾಕುತ್ತ ಇರುವುದರಲ್ಲೇ ಸಂತೃಪ್ತ ಜೀವನ ಸಾಗಿಸುವ, ಹೃದಯದಿಂದ ಶ್ರೀಮಂತರಾಗುವ ಸಂಗತಿಗಳಿಗೆ ಮೊದಲ ಆದ್ಯತೆ ನೀಡೋಣ. ಒಳಿತನ್ನೇ ಸಾಧಿಸುವ, ಸುಖ-ದುಃಖದ ದಾರಿಯಲ್ಲಿ ಸಮಚಿತ್ತದಿಂದ ಸಾಗುವ ಉತ್ಸಾಹ, ಉಲ್ಲಾಸವನ್ನು ಈ ಸಂವತ್ಸರ ಎಲ್ಲರಿಗೂ ದಯಪಾಲಿಸಲಿ. ದುಷ್ಟಶಕ್ತಿಗಳ ಹಾವಳಿಗೆ ಕಡಿವಾಣ ಬಿದ್ದು, ನೈತಿಕ, ಸಾತ್ವಿಕ ಶಕ್ತಿಗಳಿಗೆ ಗೆಲುವಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts