More

    ಚೇತರಿಕೆಯ ಸವಾಲು; ಕಾಂಗ್ರೆಸ್ ಅಧಿವೇಶನದಲ್ಲಿ ಹಲವು ನಿರ್ಣಯ

    ಛತ್ತೀಸ್​ಗಢದ ನವ ರಾಯಪುರದಲ್ಲಿ ಕಾಂಗ್ರೆಸ್​ನ 85ನೇ ಮಹಾಧಿವೇಶನ ಭಾನುವಾರ ಸಂಪನ್ನಗೊಂಡಿತು. 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಮಾವೇಶಕ್ಕೆ ಮಹತ್ವ ಪ್ರಾಪ್ತವಾಗಿತ್ತು. ಈ ಮೂರು ದಿನಗಳ ಅಧಿವೇಶನದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಪಕ್ಷದ ಭವಿಷ್ಯದ ದೃಷ್ಟಿಯಿಂದ ಇದರಿಂದಾಗುವ ಅನುಕೂಲಗಳ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಪಕ್ಷದ ಉನ್ನತ ನೀತಿನಿರ್ಧಾರಕ ಅಂಗವಾದ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯುಸಿ) ಆಂತರಿಕ ಚುನಾವಣೆ ಮೂಲಕ ನೇಮಕವಾಗಬೇಕು ಎಂಬ ಆಗ್ರಹ ಹಲವು ನಾಯಕರಿಂದ ಇದ್ದರೂ, ಹಾಗೆ ಆಗಿಲ್ಲ.

    ಈ ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಪೂರ್ಣ ಅಧಿಕಾರವನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮುಂದೆ ಇದಕ್ಕೆ ಆಕ್ಷೇಪ ಬರಬಹುದೇ ಎಂಬುದನ್ನು ಈಗಲೇ ಹೇಳಲಾಗದು. ಅಧ್ಯಕ್ಷೆಯಾಗಿ ಅನೇಕ ವರ್ಷ ಪಕ್ಷವನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರು, ನಿವೃತ್ತಿಯ ಸುಳಿವು ನೀಡಿರುವುದು ಇನ್ನೊಂದು ವಿಶೇಷ. ಅವರು ನಿವೃತ್ತರಾಗುವುದಿಲ್ಲ ಎಂದು ನಂತರದಲ್ಲಿ ಸ್ಪಷ್ಟನೆ ನೀಡಲಾಗಿದೆಯಾದರೂ, ವಯಸ್ಸು, ಆರೋಗ್ಯ ಇತ್ಯಾದಿ ಹಿನ್ನೆಲೆಯಲ್ಲಿ ಅವರ ಸಕ್ರಿಯತೆ ಎಷ್ಟರಮಟ್ಟಿಗಿರುತ್ತದೆಂಬುದು ಕುತೂಹಲಕರ.

    ಇದನ್ನೂ ಓದಿ: ಅಪಾರ್ಟ್​​ಮೆಂಟ್​​ನ 11ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿ ಸ್ಥಳದಲ್ಲೇ ಸಾವು!

    ಈ ಅಧಿವೇಶನದಲ್ಲಿ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿರುವುದು ನಿರೀಕ್ಷಿತ. ಅದರಲ್ಲೂ ಮೋದಿ ರಾಷ್ಟ್ರ ರಾಜಕಾರಣಕ್ಕೆ ಬಂದಂದಿನಿಂದ ಕಾಂಗ್ರೆಸ್ ಇನ್ನಷ್ಟು ಸಂಕಷ್ಟ ಅನುಭವಿಸುತ್ತಿರುವುದು ಸ್ಪಷ್ಟಗೋಚರ. ಮೋದಿ ಸರ್ಕಾರದ ಆರ್ಥಿಕ ನೀತಿ. ಚೀನಾ ಜತೆಗಿನ ಗಟಿ ತಂಟೆ ನಿರ್ವಹಣೆ, ಕೋಮು ಸಾಮರಸ್ಯ ಮುಂತಾದ ವಿಚಾರಗಳಲ್ಲಿ ಬಿಜೆಪಿ ಆಡಳಿತವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸುತ್ತದೆ. ಬಿಜೆಪಿಯನ್ನು ಕಟ್ಟಿಹಾಕಬೇಕೆಂದರೆ ವಿರೋಧ ಪಕ್ಷಗಳೆಲ್ಲ ಏಕಕೊಡೆಯಡಿ ಬಂದು ಚುನಾವಣೆ ಎದುರಿಸಬೇಕು ಎಂಬ ಚಿಂತನೆ ಹೊಸದೇನಲ್ಲ. ಆದರೆ ಈ ಪಕ್ಷಗಳಲ್ಲಿನ ವಿಭಿನ್ನ ಮನೋಭಾವ ಮತ್ತು ಸಿದ್ಧಾಂತದಿಂದಾಗಿ ಮೋದಿಗೆದುರಾಗಿ ಒಬ್ಬ ನಾಯಕನನ್ನು ಸರ್ವಾನುಮತದಿಂದ ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಚಿಂತನೆ ಕಾರ್ಯರೂಪಕ್ಕೆ ಬರುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಪ್ರಸ್ತುತ ರಾಯಪುರ ಸಮಾವೇಶದಲ್ಲಿಯೂ ಈ ವಿಷಯ ಚರ್ಚೆಗೆ ಬಂದಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಲಾಗಿದೆ. ಬೆನ್ನಿಗೇ, ದೇಶದ ಸದ್ಯದ ಕಷ್ಟದ ಸನ್ನಿವೇಶದಲ್ಲಿ ಕಾಂಗ್ರೆಸ್​ಗೆ ಮಾತ್ರ ಸಮರ್ಥ-ನಿರ್ಣಾಯಕ ನಾಯಕತ್ವ ನೀಡುವ ಸಾಮರ್ಥ್ಯ ಇದೆ ಎಂದೂ ಪ್ರತಿಪಾದಿಸಲಾಗಿದೆ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಜತೆಗಿನ ಮೈತ್ರಿಗೆ ಕೊನೆಹಾಡಿ ಆರ್​ಜೆಡಿ ಜತೆ ಕೈಜೋಡಿಸಿರುವುದು ಬಿಜೆಪಿವಿರೋಧಿ ಕೂಟ ರಚಿಸುವ ಕನಸಿಗೆ ನೀರೆರೆಯುವ ಬೆಳವಣಿಗೆ ಎನಿಸಿದರೂ, ಮಹತ್ವಾಕಾಂಕ್ಷಿ ನಿತೀಶ್ ಅಂತರಂಗವನ್ನು ಅರಿಯುವುದು ಅಷ್ಟು ಸುಲಭವಲ್ಲ. ಹೀಗಾಗಿ ಈ ದಿಕ್ಕಿನಲ್ಲಿ ಭವಿಷ್ಯದ ಬೆಳವಣಿಗೆಗಳ ಆಧಾರದ ಮೇಲೆ ಲೋಕಸಭಾ ಅಖಾಡದ ಸ್ವರೂಪ ಗೊತ್ತಾಗುತ್ತದೆ. ಈ ನಡುವೆ, ಕಾಂಗ್ರೆಸ್ ಪ್ರಮುಖ ವಿಚಾರಗಳಲ್ಲಿ ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಂಕಾ ಗಾಂಧಿ ಅವರ ಹೊಣೆ-ಪಾತ್ರ ಏನಿರುತ್ತದೆಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

    ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts