ನವದೆಹಲಿ: ಚಂದ್ರಶೇಖರ್ ಅಜಾದ್ ನೇತೃತ್ವದ ಭೀಮ್ ಆರ್ಮಿ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿರುವ ಜಾರಿ ನಿರ್ದೇಶನಾಲಯ (ಇಡಿ) ಹಾಥರಸ್ ಘಟನೆ ನೆಪದಲ್ಲಿ ಕೋಮು ಸಂಘರ್ಷಕ್ಕೆ 100 ಕೋಟಿ ರೂ. ಹರಿದುಬಂದಿದೆ ಎಂಬ ವಿಚಾರವನ್ನು ತಳ್ಳಿಹಾಕಿದೆ.
ಭೀಮ್ ಆರ್ಮಿ ಮತ್ತು ಇತರೆ ಸಂಘಟನೆಗಳು ಹಾಥರಸ್ನಲ್ಲಿ ನಡೆದಿದೆ ಎನ್ನಲಾದ ಪ್ರಕರಣವನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿವೆ ಎಂದು ಉತ್ತರ ಪ್ರದೇಶದ ಮಾಜಿ ಡಿಜಿಪಿ ಬ್ರಿಜ್ ಲಾಲ್ ಹೇಳಿಕೆ ನೀಡಿದ ಬೆನ್ನಲ್ಲೇ ಇಡಿ ಈ ಸ್ಪಷ್ಟನೆ ನೀಡಿದೆ.
ಇದೇ ವೇಳೆ ಹಾಥರಸ್ ಸಂತ್ರಸ್ತೆ ಕುಟುಂಬದ ಭೇಟಿಗೆ ತೆರಳಿದ್ದ ಪಿಎಫ್ಐ ಸಂಘಟನೆಯ ಸದಸ್ಯರು ಎನ್ನಲಾದ ನಾಲ್ವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಓರ್ವ ಪತ್ರಕರ್ತನೂ ಇದ್ದಾರೆ. ಕೇರಳ ಮೂಲದ ಪತ್ರಕರ್ತ ಸಿದ್ದಿಖ್ ಕಪ್ಪನ್ ಸೇರಿದಂತೆ ನಾಲ್ವರ ವಿರುದ್ಧ ದೇಶದ್ರೋಹ ಸೇರಿದಂತೆ ಇತರೆ ಪ್ರಕರಣಗಳನ್ನು ಮಥುರಾದಲ್ಲಿ ದಾಖಲಿಸಲಾಗಿದೆ.
ಹಾಥರಸ್ ಘಟನೆಯಲ್ಲಿ ಸಂತ್ರಸ್ತೆಯ ತಾಯಿ ಮತ್ತು ಆಕೆಯ ಕುಟುಂಬದವರೇ ಮೊದಲ ಆರೋಪಿಗಳು ಎಂದು ಬ್ರಿಜ್ ಲಾಲ್ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಡಿಜಿಪಿ ಮಾತ್ರವಲ್ಲದೆ, ಉತ್ತರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗದ ಮಾಜಿ ಮುಖ್ಯಸ್ಥರಾಗಿರುವ ಬ್ರಿಜ್ ಲಾಲ್, ಹಾಥರಸ್ ಘಟನೆಯನ್ನು ನೆಪವಾಗಿಸಿಕೊಂಡು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಪಿಎಫ್ಐಗೆ 100 ಕೋಟಿ ರೂ. ಹದಿದು ಬಂದಿದೆ ಎಂದು ದೂರಿದ್ದರು.
ಇದನ್ನೂ ಓದಿ: ಫುಟ್ಬಾಲರ್ ಆಗುವ ಕನಸನ್ನೇ ಕಸಿದ ಸೊಳ್ಳೆ ಕಡಿತ: ಊದಿದ ಕಾಲು, ಭಯಾನಕ ರೋಗಕ್ಕಿಲ್ಲ ಮದ್ದು..!
ತಮ್ಮ ಬೆಂಬಲಿಗರೊಂದಿಗೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಆಸ್ಪತ್ರೆಯಲ್ಲಿದ್ದ ಸಂತ್ರಸ್ತೆಯನ್ನು ನೋಡಲು ಹೋದಾಗಲೇ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿತು. ಮೊದಲೇ ಒತ್ತಡದಲ್ಲಿದ್ದ ಕುಟುಂಬ ಜನರು ನೀಡುವ ವಿಭಿನ್ನ ಹೇಳಿಕೆಗಳಿಗೆ ಗೊಂದಲಕ್ಕೀಡಾಗಿದ್ದರು. ಇದೀಗ ಕುಟುಂಬದವರು ಸಿಬಿಐ ವಿಚಾರಣೆ ಮತ್ತು ನಾರ್ಕೊ/ಪಾಲಿಗ್ರಾಫ್ ಪರೀಕ್ಷೆಯಿಂದ ಹಿಂದೆ ಸರಿಯುತ್ತಿದ್ದಾರೆಂದು ಲಾಲ್ ಹೇಳಿದ್ದರು.
ಮಧ್ಯರಾತ್ರಿ ಅಂತ್ಯಕ್ರಿಯೆ ಬಗ್ಗೆ ಮಾತನಾಡಿದ್ದ ಲಾಲ್, ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಸಂಘರ್ಷ ಉಂಟು ಮಾಡಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಭೀಮ್ ಆರ್ಮಿ, ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಸಂಚು ರೂಪಿಸಿದ್ದವು. ಇದು ಗುಪ್ತಚರ ಇಲಾಖೆ ಗಮನಕ್ಕೆ ಬಂದಿತ್ತು. ಹೀಗಾಗಿ ಆತುರವಾಗಿ ನಡುರಾತ್ರಿ ಅಂತ್ಯಕ್ರಿಯೆ ನೆರವೇರಿಸಬೇಕಾಯಿತು ಎಂದು ಉತ್ತರ ಪ್ರದೇಶದ ಪೊಲೀಸರ ಕ್ರಮವನ್ನು ಲಾಲ್ ಸಮರ್ಥಿಸಿಕೊಂಡಿದ್ದಾರೆ.
ಲಾಲ್ ಹೇಳಿಕೆ ತುಂಬಾ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತಿರುವ ಇಡಿ 100 ಕೋಟಿ ರೂ. ಹಣದ ಹರಿವು ಮತ್ತು ಭೀಮ್ ಆರ್ಮಿ ಹಾಗೂ ಪಿಎಫ್ಐ ನಡುವೆ ಸಂಬಂಧವಿದೆ ಎಂಬುದನ್ನು ತಳ್ಳಿಹಾಕಿದೆ. (ಏಜೆನ್ಸೀಸ್)
ಹಾಥರಸ್ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!