ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಇಡೀ ರಾಜ್ಯದಲ್ಲಿ ರೌಡಿಸಂನ್ನು ಬೇರು ಸಮೇತ ಕಿತ್ತೆಸೆದು ಮರ್ಯಾದಸ್ಥ ಜನ ತಲೆ ಎತ್ತಿ ನಿರ್ಭೀತಿ ಯಿಂದ ಓಡಾಡುವ ವಾತಾವರಣ ನಿರ್ಮಾಣ ಮಾಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾದ ಪೂರ್ವ ಸಂಚಾರ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ರೌಡಿಗಳು ಮತ್ತು ಪೊಲೀಸರು ಒಟ್ಟಿಗಿರಲು ಸಾಧ್ಯವೇ ಇಲ್ಲ. ಹಾಗಾಗಿ ಎಲ್ಲ ರೌಡಿಗಳನ್ನು ಮಟ್ಟ ಹಾಕಿದ್ದೇವೆ ಎಂದರು.
ಗೃಹ ಸಚಿವನಾಗಿ ಕಳೆದೊಂದು ವರ್ಷದ ಅವಧಿಯಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಆರಂಭದಲ್ಲಿ ಮುಜುಗರ ಅನುಭವಿಸಿದರೂ ಬಳಿಕ ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನ ಅವಧಿಯಲ್ಲೇ ಕೇಂದ್ರದ ಅನುದಾನದಲ್ಲಿ ನೂತನ ಅತ್ಯಾಧುನಿಕ ವಿಐಪಿ ಕೇಂದ್ರ ಕಾರಾಗೃಹ ಸುಮಾರು 108 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲೇ ನಿರ್ಮಾಣವಾಗುತ್ತಿದ್ದು ಹೆಮ್ಮೆಯ ಸಂಗತಿಯಾಗಿದೆ. 15 ವರ್ಷದ ಹಿಂದೆ ಇಡೀ ರಾಜ್ಯದ ಜನರ ಹಿತವನ್ನು ಕಾಯುವ ಪೊಲೀಸ್ ಇಲಾಖೆ ನಿರ್ಲಕ್ಷೃಕ್ಕೆ ಒಳಗಾಗಿತ್ತು. ವರ್ಷಕ್ಕೆ 5 ಠಾಣೆಗಳು ನಿರ್ಮಾಣವಾಗುತ್ತಿದ್ದವು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 117 ಹೊಸ ಠಾಣೆ ನಿರ್ಮಿಸಲಾಗಿದೆ ಎಂದು ಹೇಳಿದರು.
ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್ಕುಮಾರ್, ಸಾಗರ ಎಎಸ್ಪಿ ರೋಹನ್ ಜಗದೀಶ್, ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀಶಂಕರ್ನಾಯ್ಕ, ಸದಸ್ಯ ಪ್ರಭು ಇದ್ದರು.