ಬೆಂಗಳೂರು: ಸಮಾಜದ ಅಂಕುಡೊಂಕು ತಿದ್ದಬೇಕಿದ್ದ, ಸರ್ಕಾರವನ್ನು ಸದಾ ಎಚ್ಚರಿಸುವ ಕಾರ್ಯ ಮಾಡಬೇಕಿದ್ದ ಪತ್ರಿಕೋದ್ಯಮದ ಧ್ವನಿ ಇತ್ತೀಚಿನ ದಿನಗಳಲ್ಲಿ ನಶಿಸುತ್ತಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್, ಶನಿವಾರ ಎ್ಕೆಸಿಸಿಐನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡಗೆ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯ ಕಳೆದುಕೊಳ್ಳುವ ಹಂತದ ಸ್ಥಿತಿಗೆ ಪತ್ರಕರ್ತರು ಬರುವಂತಾಗಿದೆ. ಹಿಂದೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ತಲೆ ಕೆರೆದುಕೊಂಡು ಬರುತ್ತಿದ್ದೆವು. ಈಗ ಅದರ ಸ್ವರೂಪವೇ ಬದಲಾಗಿದ್ದು, ತಲೆ ಬಾಚಿಕೊಂಡು ಬಂದರೆ ಸಾಕಾಗುತ್ತದೆ. ಒಬ್ಬರು ಮತ್ತೊಬ್ಬರಿಗೆ ಬೈಯುವುದೇ ವರ್ಷದಲ್ಲಿ 100 ದಿನ ಪ್ರಮುಖ ಸುದ್ದಿಗಳಾಗುತ್ತದೆ. ಸರ್ಕಾರ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದೊಳಗೆ ಭ್ರಷ್ಟಾಚಾರ ಒಪ್ಪಿಕೊಂಡು ಅದಕ್ಕೆ ಗೌರವ ಸಲ್ಲಿಸಲು ಪ್ರಾರಂಭ ಮಾಡಿದ್ದೇವೆ. ಈ ಬಗ್ಗೆ ಜಾಗೃತರಾಗಬೇಕಿದೆ. ಮುಂದಿನ ಜನಾಂಗಕ್ಕೆ ಉತ್ತಮವಾದುದನ್ನು ವಾಪಸ್ ತರದಿದ್ದರೆ ಕರ್ತವ್ಯ ಚ್ಯುತಿ ಮಾಡಿದಂತಾದೀತು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಆಪರೇಷನ್ ಕಮಲ ಬಗ್ಗೆ ಶಿವಲಿಂಗೇಗೌಡ್ರು ಸ್ಫೋಟಕ ಹೇಳಿಕೆ
ಶ್ರೀಮಂತರು, ರಾಜಕಾರಣಿಗಳು, ಉದ್ಯಮಿಗಳ ವಿರುದ್ಧ ಬರೆಯಲು ಪತ್ರಕರ್ತರಿಂದ ಆಗುತ್ತಿಲ್ಲ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರೃ ಶೇ.50 ಉಳಿದಿದೆ. ಪ್ರತಿಯೊಬ್ಬ ಪತ್ರಿಕೋದ್ಯಮಿ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸಿ ಆತ್ಮಾವಲೋಕನ ಮಾಡಿಕೊಳ್ಳುವ ಪ್ರಸಂಗ ಬಂದಿದೆ. ಈ ಸಂಬಂಧ ಹಿರಿಯ ಪತ್ರಕರ್ತರು ಎಲ್ಲರನ್ನೂ ಜಾಗೃತಗೊಳಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು. ಹಿರಿಯ ಪತ್ರಕರ್ತರಾದ ಆರ್.ಪಿ. ಜಗದೀಶ್, ನಾಗಣ್ಣ ಮತ್ತಿತರರಿದ್ದರು.