ಲಖನೌ: ಹೊಸ ವರ್ಷದ ಆರಂಭದಿಂದಲೇ ಚಳಿಗಾಲದ ದರ್ಶನವಾಗುತ್ತಿದ್ದು, ಗುಡ್ಡಗಾಡು ಪ್ರದೇಶದಿಂದ ಇಡಿದು ಬಯಲುಸೀಮೆ ವರೆಗೂ ಚಳಿಯ ಪರಿಣಾಮವನ್ನು ಕಾಣಬಹುದಾಗಿದೆ. ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ಚಳಿ ಮತ್ತು ದಟ್ಟವಾದ ಮಂಜು ಆವರಿಸಿದ್ದು, ಜನರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ.
ಇದೀಗ ಘಟನೆಯೊಂದರಲ್ಲಿ ವ್ಯಕ್ತಿಗಳಿಬ್ಬರು ಚಳಿ ತಾಳಲಾರದೆ ಚಲಿಸುತ್ತಿದ್ದ ರೈಲಿನಲ್ಲಿ ಬಿಸಿ ಕಾಯಿಸಿಕೊಳ್ಳಲು ಬೆಂಕಿ ಹಚ್ಚಿರುವ ಘಟನೆ ಉತ್ತರಪ್ರದೇಶದ ಬರ್ಹಾನ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಘಟನೆ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಬೌಲಿಂಗ್ ಲೈನ್ಅಪ್ ಬಗ್ಗೆ ‘ಮೋಯೆ ಮೋಯೆ’ ಎಂದ ಚಹಲ್; ವಿಡಿಯೋ ವೈರಲ್
ಘಟನೆ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ನವದೆಹಲಿಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ಚಳಿ ಹೆಚ್ಚಿದ್ದ ಕಾರಣ ಈ ರೀತಿ ಮಾಡಿದ್ದಾಗಿ ಬಂಧಿತರಿಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರನ್ನು ಫರೀದಾಬಾದ್ ಮೂಲದ ದೇವೇಂದ್ರ (25), ಚಂದನ್ (23) ಎಂದು ತಿಳಿದು ಬಂದಿದೆ.
ಜನವರಿ 3 ರಂದು ರಾತ್ರಿ ಬರ್ಹಾನ್ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಕ್ರಾಸಿಂಗ್ನಲ್ಲಿ ಕರ್ತವ್ಯದಲ್ಲಿದ್ದ ಗೇಟ್ಮ್ಯಾನ್ ರೈಲಿನ ಕೋಚ್ನಿಂದ ಬೆಳಕು ಮತ್ತು ಹೊಗೆ ಬರುತ್ತಿರುವುದನ್ನು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಬರ್ಹಾನ್ ರೈಲ್ವೆ ನಿಲ್ದಾಣದ ತಮ್ಮ ಮೇಲಧಿಕಾರಿಗಳಿಗೆ ಗೇಟ್ ಮ್ಯಾನ್ ಮಾಹಿತಿ ನೀಡಿದ್ದಾರೆ. ನಂತರ ಆರ್ಪಿಎಫ್ ತಂಡ ರೈಲನ್ನು ಮುಂದಿನ ನಿಲ್ದಾಣ ಚಾಮ್ರೌಲಾದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.