ಹರಿಹರ: ನಗರದ ಡಿಆರ್ಎಂ ಸರ್ಕಾರಿ ಪ್ರೌಢಶಾಲೆಯ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯು ಶಾಲೆಯ ಹಳೆಯ ವಿದ್ಯಾರ್ಥಿ, ಮಾಜಿ ಸಚಿವ ಡಾ. ವೈ. ನಾಗಪ್ಪ ಅವರ ನಿವಾಸದಲ್ಲಿ ಮಂಗಳವಾರ ನಡೆಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ವೈ. ನಾಗಪ್ಪ, ವಿದ್ಯೆ ಕಲಿಸಿದ ಶಾಲೆ, ಶಿಕ್ಷಕರನ್ನು ಸ್ಮರಿಸಲು ಇದೊಂದು ಅವಕಾಶ ಒದಗಿ ಬಂದಿದೆ. ಶಾಲೆಯಲ್ಲಿ 75 ವರ್ಷಗಳಿಂದ ಓದಿದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಸಹಕಾರ ಪಡೆದು ಶಾಲೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಮಾತನಾಡಿ, ನಾವು ಶಿಕ್ಷಣ ಪಡೆಯುವಾಗ ಕಟ್ಟಡ ಹೈಟೆಕ್ ಆಗಿರದಿದ್ದರೂ ಉತ್ತಮ ಶಿಕ್ಷಕರಿದ್ದರು. ಅವರಿಂದ ಶಿಕ್ಷಣ ಪಡೆದವರು ಉನ್ನತ ಸಾಧನೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ಹಾಗೂ ಸಭಾಭವನ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಸರ್ಕಾರದಿಂದ ಅನುದಾನ ಬರುತ್ತದೆ. ಹಳೆಯ ವಿದ್ಯಾರ್ಥಿಗಳು, ಸಾರ್ವಜನಿಕರ ನೆರವು ಪಡೆಯೋಣ ಎಂದರು.
ಉಪ ಪ್ರಾಚಾರ್ಯ ಸಿದ್ದರಾಮೇಶ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಜೆ. ಕಲೀಂಬಾಷಾ, ಅನಂತರಾಮ ಶ್ರೇಷ್ಠಿ, ಕೃಷ್ಣಾಸಾ ಭೂತೆ, ತುಕಾಮಣಿಸಾ ಭೂತೆ, ಎಚ್.ಕೆ. ಕೊಟ್ರಪ್ಪ, ವಸುಪಾಲಪ್ಪ, ಸಿದ್ದಲಿಂಗಸ್ವಾಮಿ, ಮುಖಂಡ ಕೆ.ಬಿ. ಬಸವರಾಜಪ್ಪ ಇತರರಿದ್ದರು.